ಚಿಕ್ಕಮಗಳೂರು: ತಾಲ್ಲೂಕಿನ ಹೊಸಪೇಟೆಯ ಬಾಲಕಿ ಸುಪ್ರಿತಾ ಶಾಲೆ ಮುಗಿಸಿ ಸಂಜೆ ಮನೆಗೆ ಹೋಗುವಾಗ ಕಂಬಿಹಳ್ಳಿ ಸಮೀಪ ಕಾಫಿ ಎಸ್ಟೇಟ್ನೊಳಗಿನ ಹಳ್ಳದಲ್ಲಿ ತೇಲಿಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿ ಶೋಧದಲ್ಲಿ ತೊಡಗಿದ್ದಾರೆ.
ತೊಗರಿಹಂಕಲ್ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ ಹಳ್ಳದಲ್ಲಿ ತೇಲಿ ಹೋಗಿದ್ದಾರೆ. ಸುಪ್ರಿತಾ ಹೊಸಪೇಟೆಯ ಆ್ಯಂಡ್ರೂ ಮತ್ತು ರೋಸಾ ದಂಪತಿ ಪುತ್ರಿ.
‘ಸಹೋದರ ಸೈಮನ್, ಸ್ನೇಹಿತರೊಂದಿಗೆ ಸುಪ್ರಿತಾ ಮನೆಗೆ ಸಾಗುವಾಗ ಅವಘಡ ಸಂಭವಿಸಿದೆ. ಕಾಲಿಗೆ ಅಂಟಿದ್ದ ಮಣ್ಣು ತೊಳೆದುಕೊಳ್ಳಲು ಹಳ್ಳದ ಬಳಿ ಹೋದಾಗ ತೇಲಿ ಹೋಗಿದ್ದಾರೆ’ ಎಂದು ಅಗ್ನಿಶಾಮಕ ಅಧಿಕಾರಿ ಶಶಿಧರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಗ್ನಿಶಾಮಕ ದಳದ ನಾಲ್ಕು ತಂಡಗಳು ಹಳ್ಳದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ಹಳ್ಳದ ಬಳಿ ಜನರು ಜಮಾಯಿಸಿದ್ದಾರೆ.