ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರಿನಲ್ಲಿ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಮಂಜೂರಾತಿಗೆ ಸಂಬಂಧಿಸಿದಂತೆ ಎಫ್ಡಿಎ ಎಚ್.ಸಿ.ಮಹೇಶ್, ಗ್ರಾಮ ಲೆಕ್ಕಿಗರಾದ ಎನ್.ಎನ್.ಗಿರೀಶ್, ಬಿ.ವೈ.ಗೀತಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಬಾಳೂರಿನ ಸರ್ವೆ ನಂಬರ್ 168ರಲ್ಲಿ ಗೋಮಾಳ ಜಾಗವನ್ನು ತಲಾ 4.38ಎಕರೆಯಂತೆ 11 ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ.
‘ಆರೋಪಿಗಳ ಪತ್ತೆ ನಿಟ್ಟಿನಲ್ಲಿ ಶೋಧ ಶುರುವಾಗಿದೆ. ತಂಡ ವಿವಿಧೆಡೆಗೆ ತೆರಳಿ ತಲಾಶ್ ನಡೆಸಿದೆ. ಶೀಘ್ರದಲ್ಲಿ
ಪತ್ತೆ ಹಚ್ಚುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ‘ಪ್ರಜಾವಾಣಿ’ಗೆ ತಿಳಿಸಿದರು.