ಚಿಕ್ಕಮಗಳೂರು: ‘ಎಲ್ಲರಿಗೂ ಅವರ ಅಪೇಕ್ಷೆಯಂತೆ ಖಾತೆ ಹಂಚುವುದು ಕಷ್ಟ ಸಾಧ್ಯ. ಖಾತೆ ವಿಚಾರದಲ್ಲಿ ಅಸಮಾಧಾನಗೊಂಡಿರುವವರನ್ನು ಮುಖ್ಯಮಂತ್ರಿಯವರು ಖಂಡಿತ ಸಮಾಧಾನ ಮಾಡುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ತಂಡವು ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯೊಬ್ಬನ್ನು ಬಂಧಿಸಿದೆ. ನಾಡಿನಲ್ಲಿ ವಿಚ್ಛಿದ್ರಕಾರಕ ಶಕ್ತಿ ತಲೆ ಎತ್ತಲು ಬಿಡುವುದಿಲ್ಲ. ಪೊಲೀಸರನ್ನೂ ಅಲರ್ಟ್ ಮಾಡುತ್ತೇವೆ’ ಎಂದು ಉತ್ತರಿಸಿದರು.
‘ಬಾಂಗ್ಲಾದಿಂದ ಬಂದು ಇಲ್ಲಿ ನೆಲೆಸಿದ್ದರೆ ಅಂಥವರ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಅಸ್ಸಾಂನಲ್ಲಿ ದಾಖಲೆ ಸೃಷ್ಟಿಸಿಕೊಂಡು ಬಂದಿದ್ದಾರೆ ಎಂಬ ಮಾಹಿತಿ ಇದೆ, ಆ ದಾಖಲೆಗಳ ಅಸಲಿಯತ್ತು ಪರಿಶೀಲಿಸುವಂತೆ ತಿಳಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.