ನರಸಿಂಹರಾಜಪುರ: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿ ಸ್ಥಾಪಿಸಿದರು ಎಂದು ಸಮಿತಿಯ ಅಧ್ಯಕ್ಷ ಕೆನಡಿ ಶಾಂತಕುಮಾರ್ ಹೇಳಿದರು.
ಇಲ್ಲಿನ ಲಿಟ್ಲ್ ಫ್ಲವರ್ ಚರ್ಚ್ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿ.ಎಸ್ ಯಡಿಯೂರಪ್ಪ ಅವರ ಬದ್ಧತೆಯಿಂದ ಸಮಿತಿ ಬೆಳೆಯಲು ಕಾರಣವಾಗಿದೆ. ಆರು ತಿಂಗಳಿನಿಂದ ಪ್ರವಾಸ ಆರಂಭಿಸಿದ್ದು, 20 ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ. ಚರ್ಚ್ ಹಾಗೂ ಕ್ರೈಸ್ತ ಸಮುದಾಯದ ಸಮಸ್ಯೆಗಳ ಬಗ್ಗೆ ಧರ್ಮಗುರುಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದರು.
ಸರ್ಕಾರಿ ಸೌಲಭ್ಯಗಳನ್ನು ಸಮುದಾಯದವರು ಬಳಸಿಕೊಳ್ಳುತ್ತಿಲ್ಲ. ಸರ್ಕಾರಿ ಸವಲತ್ತು ಪಡೆಯುವಲ್ಲಿ ಕ್ರೈಸ್ತರು ಹಿಂದೆ ಬಿದ್ದಿದ್ದಾರೆ. 1983ರಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮಾತ್ರ ಇತ್ತು. ಕ್ರೈಸ್ತ ಅಭಿವೃದ್ಧಿ ಸಮಿತಿ ಸ್ಥಾಪನೆಯಾದ ಮೇಲೆ ಅನೇಕ ಐತಿಹಾಸಿಕ ಚರ್ಚ್ಗಳ ಜೀರ್ಣೋದ್ಧಾರ ಮಾಡಲಾಗಿದೆ ಎಂದರು.
ಸಮುದಾಯದ ಪಂಗಡಗಳ ಮಧ್ಯೆ ವೈಚಾರಿಕ ವಿರೋಧಗಳು ಸಹಜ. ಸಮಸ್ಯೆಗಳನ್ನು ನಮ್ಮಲ್ಲಿಯೇ ಬಗೆಹರಿಸಿಕೊಳ್ಳಬೇಕು. ಧರ್ಮ ಗುರು ಗಳು ಸಮುದಾಯದವರ, ಸಮಾಜದ ನಡುವಿನ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಬೇಕು ಎಂದರು.
ಮುಖಂಡ ಪಿ.ಜೆ.ಅಂಟೋಣಿ ಮಾತನಾಡಿದರು. ಲಿಟ್ಲ್ ಫ್ಲವರ್ ಚರ್ಚ್ ಧರ್ಮಗುರು ಫಾದರ್ ಥೋಮಸ್, ಚಿಕ್ಕಮಗಳೂರು ಕೆಎಂಡಿಸಿ ವ್ಯವಸ್ಥಾಪಕ ಚಂದ್ರಶೇಖರ್, ಸೇಂಟ್ ಜೋರ್ಜ್ ಚರ್ಚ್ ಧರ್ಮಗುರು ಫಾದರ್ ಜಾನ್ಸನ್, ಮುಖಂಡರಾದ ಎಂ.ಪಿ.ಸನ್ನಿ, ಈ.ಸಿ.ಜೋಯಿ, ಸಿಜು ಇದ್ದರು.