ಅಜ್ಜಂಪುರ: ಭದ್ರಾ ಮೇಲ್ದಂಡೆ ಯೋಜನೆ ಅಡಿ, ಭದ್ರಾ ಜಲಾಶಯ ದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುತ್ತಿದೆ. ಇದರಿಂದ ತಾಲ್ಲೂಕಿನ ಎಚ್. ತಿಮ್ಮಾಪುರ ಬಳಿ ಸೇತುವೆಯೊಂದು ಜಲಾವೃತಗೊಂಡಿದೆ. ಇದರಿಂದ ಕೃಷಿ ಜಮೀನುಗಳಿಗೆ ತೆರಳುವ ಮಾರ್ಗ ಬಂದ್ ಆಗಿದ್ದು, ಕೃಷಿ ಚಟುವಟಿಕೆಗೆ ಭಾರಿ ತೊಂದರೆ ಎದುರಾಗಿದೆ.
‘ಒಂದೆರಡು ಕಿ.ಮೀ ಅಂತರದ ಜಮೀನಿಗೆ ತೆರಳಲು 20- 25 ಕಿಮೀ ದೂರ ಸಾಗುವಂತಾಗಿದೆ. ಈಗ ಹಿಂಗಾರು ಬಿತ್ತನೆ ಸಮಯ. ಜೋಳ, ಕಡಲೆ ಬಿತ್ತನೆ ನಡೆಸಬೇಕಿತ್ತು. ಸೇತುವೆ ಮುಳುಗಡೆಯಿಂದ ಹಿಂಗಾರು ಬೆಳೆ ಕೈತಪ್ಪಲಿದೆಯೋ ಎಂಬ ಆತಂಕ ಮನೆಮಾಡಿದೆ’ ಎಂದು ಕೃಷಿಕ ಮಲ್ಲಪ್ಪ ಹೇಳಿದ್ದಾರೆ.
‘ಸೇತುವೆ ಕಾಮಗಾರಿ ಕಳಪೆಯಾಗಿದೆ. ತಡೆಗೋಡೆಯನ್ನೂ ಹಾಕಿಲ್ಲ. ಸೇತುವೆ, ನಿರ್ಮಾಣಗೊಂಡು 6 ತಿಂಗಳು ಕಳೆಯುವಷ್ಟರಲ್ಲಿಯೇ ಕುಸಿದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನ ಆಗಿಲ್ಲ. ಇನ್ನು ನೀರಿನಿಂದಾಗುವ ಸಮಸ್ಯೆ ತಡೆಯುವಂತೆ ಅಧಿಕಾರಿಗಳು, ಶಾಸಕರಿಗೆ ಮನವಿ ಮಾಡಿದ್ದರೂ ಪರಿಹಾರ ದೊರೆತಿಲ್ಲ’ ಎಂದು ಪ್ರಭು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಹಿಂದೊಮ್ಮೆ ಅಜ್ಜಂಪುರ ತಹಶೀಲ್ದಾರ್ ಸ್ಥಳಕ್ಕೆ ಬೇಟಿ ನೀಡಿದ್ದರು. ನಮ್ಮ ಸಮಸ್ಯೆ ಆಲಿಸಿ, ಕೃಷಿ ಜಮೀನಿಗೆ ನೀರು ಹರಿಯದಂತೆ ಮತ್ತು ಜಾನುವಾರು, ರೈತರು ಸುಗಮವಾಗಿ ಸಾಗಲು ಸರಿಯಾದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಕಾರ್ಯಗತಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
‘ನೀರಿನ ಸೆಳೆತಕ್ಕೆ ಸಿಲುಕಿ ಗ್ರಾಮದ ಮಹೇಶ್ವರಪ್ಪ ಅವರ 2 ಎತ್ತು, ವೀರಭದ್ರಪ್ಪನವರ ಒಂದು ಹಸು ಮೃತಪಟ್ಟಿದೆ. ಅವರಿಗೆ ಪರಿಹಾರ ನೀಡಬೇಕು. ನೀರು ಹರಿವು ಪ್ರಮಾಣ ತಗ್ಗಿಸಿ, ಜಮೀನುಗಳಿಗೆ ತೆರಳಲು ಅನುಕೂಲ ಮಾಡಿಕೊಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.