ಕೊಪ್ಪ: ‘ಕುವೆಂಪು ಪ್ರಕೃತಿಯ ಕವಿ. ದೇವರ ಇರುವನ್ನು ನಿರಾಕರಿಸಿಲ್ಲ. ಅವರು ಪ್ರಕೃತಿಯಲ್ಲಿ ದೇವರನ್ನು ನೋಡಿದರು. ಆಗಸದಲ್ಲಿ ಹಕ್ಕಿ ಹಾರುವುದನ್ನು ದೇವರು ರುಜು ಮಾಡಿದಂತೆ ಎಂದು ಬಣ್ಣಿಸಿದ್ದಾರೆ’ ಎಂದು ಪಟ್ಟಣದ ಕೆಪಿಎಸ್(ಪದವಿ ಪೂರ್ವ ವಿಭಾಗ) ಉಪನ್ಯಾಸಕ ಎಚ್.ಎ.ಪ್ರಕಾಶ್ ಹೇಳಿದರು.
ತಾಲ್ಲೂಕು ಸಿರಿಗನ್ನಡ ವೇದಿಕೆ ವತಿಯಿಂದ ಪಟ್ಟಣ ಸಮೀಪದ ಬಿ.ಜಿ.ಎಸ್.ವೆಂಟೇಶ್ವರ ವಿದ್ಯಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಕುರಿತು ಉಪನ್ಯಾಸ ಮಾಲಿಕೆ-1’ ಅಡಿಯಲ್ಲಿ ನಡೆದ ‘ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ' ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.
‘ಕುವೆಂಪು ಅವರು ಜಗತ್ತಿಗೆ ವಿಶ್ವ ಮಾನವ ಸಂದೇಶವನ್ನು ಸಾರಿದರು. ಯಾವ ಧರ್ಮ, ಯಾವ ಜಾತಿಯವರಾದರೂ ನಾವೆಲ್ಲಾ ಒಂದೇ, ವಿಶ್ವಮಾನವರು. ‘ಸರ್ವೋದಯ’ ಎಂದರೆ ಎಲ್ಲರ ಉದ್ಧಾರವೂ ಆಗಬೇಕು. ಎಲ್ಲರೂ ಶ್ರೇಷ್ಠ, ಎಲ್ಲಾ ಉದ್ಯೋಗವೂ ಶ್ರೇಷ್ಠ. ಮೂಢನಂಬಿಕೆಯಿಂದ ಹೊರಬರಬೇಕು ಎಂದು ಕುವೆಂಪು ಅವರು ಕರೆಕೊಟ್ಟರು’ ಎಂದರು.
ಬಿ.ಜಿ.ಎಸ್.ವೆಂಕಟೇಶ್ವರ ವಿದ್ಯಾ ಮಂದಿರದ ಪ್ರಾಂಶುಪಾಲ ಎಚ್.ಕೆ.ಮಹಾಬಲೇಶ್ ಉದ್ಘಾಟಿಸಿದರು. ಕೊಪ್ಪ ತಾಲ್ಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಂ.ವಿ.ಗಂಗಾಧರ್ ಅವರನ್ನು ಸನ್ಮಾನಿಸಲಾಯಿತು.
ಸಿರಿಗನ್ನಡ ವೇದಿಕೆ ಉಪಾಧ್ಯಕ್ಷ ಜಿನೇಶ್ ಇರ್ವತ್ತೂರ್, ಕಾರ್ಯದರ್ಶಿ ಬಿ.ಡಿ.ನಾಗರಾಜ್, ಸಂಘಟನಾ ಕಾರ್ಯದರ್ಶಿ ಕೆ.ಕೆ.ಜ್ಯೋತಿ, ಸೋನಿಯಾ, ಶ್ಯಾಮಲಾ, ರಾಘವೇಂದ್ರ, ನರಸಿಂಹಮೂರ್ತಿ, ರೂಪಕಲಾ, ನಂದಾದೀಪ ಕಳಸಾಪುರ, ಉಪೇಂದ್ರ ನಾಯಕ್, ಸುಮಾ ಅರುಣ್, ನಿಲುಗುಳಿ ಪದ್ಮನಾಭ, ರೇಣುಕಾ ಇದ್ದರು.