ಚಿಕ್ಕಮಗಳೂರು: ಪ್ರತಿನಿತ್ಯವೂ ಜನಜಂಗಳಿ ಇರುವ ಕಚೇರಿಗಳಲ್ಲಿ ಉಪನೋಂದಣಾಧಿಕಾರಿ ಕಚೇರಿ ಪ್ರಮುಖವಾದದು. ಇಲ್ಲಿ ದಿನವಿಡಿ ಕಾಯುವ ಜನ ಮೂಲಸೌಕರ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಬಹುತೇಕ ವೃದ್ಧರೇ ಆಸ್ತಿ ನೋಂದಣಿಗೆ ಬರುತ್ತಿದ್ದು, ಮೆಟ್ಟಿಲು ಹತ್ತಲು ಪರದಾಡುವ ಸ್ಥಿತಿ ಇದೆ.
ಚಿಕ್ಕಮಗಳೂರು ನಗರದ ರತ್ನಗಿರಿ ರಸ್ತೆಯಲ್ಲಿದ್ದ ಹಿರಿಯ ಉಪನೋಂದಣಾಧಿಕಾರಿ ಕಚೇರಿಯನ್ನು ಈಗ ತಹಶೀಲ್ದಾರ್ ಕಚೇರಿಗೆ ಸ್ಥಳಾಂತರ ಮಾಡಲಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಖಾಲಿ ಇದ್ದ ಕೊಠಡಿಗಳನ್ನು ನೋಡಿ ನೋಂದಣಾಧಿಕಾರಿ ಕಚೇರಿಗೆ ಬಿಟ್ಟುಕೊಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ಕುಮಾರ್ ಕಟಾರಿಯಾ ಸೂಚನೆ ನೀಡಿದ್ದರು.
ಈಗ ಕಚೇರಿ ಸ್ಥಳಾಂತರವಾಗಿದ್ದು, ತಿಂಗಳಿಗೆ ₹65 ಸಾವಿರ ಬಾಡಿಗೆ ಪಾವತಿ ಈಗ ಉಳಿತಾಯವಾದಂತೆ ಆಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ನಾಲ್ಕು ಕೊಠಡಿಗಳನ್ನು ನೀಡಲಾಗಿದೆ.
ನೆಲ ಮಹಡಿಯಲ್ಲಿ ಎರಡು ಮತ್ತು ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳನ್ನು ನೀಡಲಾಗಿದೆ. ನೆಲಮಹಡಿಯಲ್ಲಿ ನೋಂದಣಿ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಿರಿಯ ಉಪನೋಂದಣಾಧಿಕಾರಿ ಕೊಠಡಿ ಕೂಡ ಇಲ್ಲೇ ಇದೆ. ಮೊದಲ ಮಹಡಿಯಲ್ಲಿರುವ ಎರಡು ಕೊಠಡಿಯನ್ನು ರೆಕಾರ್ಡ್ ಕೊಠಡಿಯಾಗಿ ಬಳಸಲಾಗುತ್ತಿದೆ.
ದಿನವೂ ನೂರಾರು ಜನ ನೋಂದಣಿಗಾಗಿ ಬರುತ್ತಿದ್ದು, ಎರಡು ಕೊಠಡಿಯಲ್ಲಿ ಕಾರ್ಯ ನಿರ್ವಹಣೆ ಕಷ್ಟವಾಗಿದೆ. ಕಿರಿದಾದ ಕೊಠಡಿಯಲ್ಲಿ ಮೂರು ಮೇಜುಗಳನ್ನು ಇಡಲಷ್ಟೆ ಸಾಧ್ಯವಾಗಿದ್ದು, ಅವುಗಳ ಮೇಲೆಯೇ ನಾಲ್ಕು ಕಂಪ್ಯೂಟರ್ಗಳನ್ನು ಇರಿಸಲಾಗಿದೆ. ನಾಲ್ಕು ಕೌಂಟರ್ಗಳನ್ನು ತೆರೆದು ನೋಂದಣಿ ಮಾಡಲಾಗುತ್ತಿದೆ.
ಹಿರಿಯ ಉಪನೋಂದಣಾಧಿಕಾರಿ ಕೊಠಡಿಯಲ್ಲೇ ಪ್ರಥಮ ದರ್ಜೆ ಸಹಾಯಕರಿಗೂ ಕಂಪ್ಯೂಟರ್ ಇರಿಸಿ ಕೂರಿಸಲಾಗಿದೆ. ಆಸ್ತಿ ನೋಂದಣಿಗೆ ಬರುವ ಜನ ಕಚೇರಿಯ ಹೊರಭಾಗದಲ್ಲೇ ಕುಳಿತು ಕಾಯಬೇಕಿದೆ. ಕಾರಿಡಾರ್ ಭರ್ತಿಯಾಗುತ್ತಿದ್ದು, ಜನ ನೂಕುನುಗ್ಗಲಿನಲ್ಲೇ ಸಾಗಬೇಕಾದ ಸ್ಥಿತಿ ಇದೆ.
ಪಕ್ಕದಲ್ಲಿ ತಾಲ್ಲೂಕು ಕಚೇರಿಯ ರೆಕಾರ್ಡ್ ಕೊಠಡಿ ಇದೆ. ಅದನ್ನೂ ಉಪನೋಂದಣಾಧಿಕಾರಿ ಕಚೇರಿಗೆ ಬಿಟ್ಟುಕೊಟ್ಟಿದ್ದರೆ ಕೆಲಸ ಸರಾಗವಾಗುತ್ತಿತ್ತು. ಜನರಿಗೂ ಅನುಕೂಲ ಆಗುತ್ತಿತ್ತು ಎಂದು ಸಿಬ್ಬಂದಿ ಹೇಳುತ್ತಾರೆ. ತಹಶೀಲ್ದಾರ್ ಕಚೇರಿಯಲ್ಲಿ ಮೊದಲೇ ಇದ್ದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಜನ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳಲ್ಲಿ ಇರುವ ನೋಂದಣಾಧಿಕಾರಿ ಕಚೇರಿಗಳೂ ಬಹುತೇಕ ಮಿನಿ ವಿಧಾನಸೌಧದಲ್ಲೇ ಇದ್ದು, ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿವೆ.
ಪೂರಕ ಮಾಹಿತಿ: ಬಾಲು ಮಚ್ಚೇರಿ, ರವಿಕುಮಾರ್ ಶೆಟ್ಟಿಹಡ್ಲು, ಕೆ.ವಿ.ನಾಗರಾಜ್, ಕೆ.ಎನ್.ರಾಘವೇಂದ್ರ.
ಮೂಡಿಗೆರೆ: ಪಟ್ಟಣದ ತಾಲ್ಲೂಕು ಕಚೇರಿಯ ಮೊದಲನೇ ಅಂತಸ್ತಿನಲ್ಲಿ ಉಪನೋಂದಣಾಧಿಕಾರಿಗಳ ಕಚೇರಿಯಿದ್ದು ಕಚೇರಿಗೆ ಬರಲು ಅಂಗವಿಕಲರಿಗೆ ಇಳಿಜಾರಿನ ಮಾರ್ಗವಿಲ್ಲದೇ ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಗಾಗಿ ಬರುವವವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಆದರೂ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳು ಮರೀಚಿಕೆಯಾಗಿವೆ. ಕಾವೇರಿ– 2 ತಂತ್ರಾಂಶ ಜಾರಿಯಾದ ಬಳಿಕ ಪದೇ ಪದೇ ಸರ್ವರ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆಸ್ತಿಗಳ ನೋಂದಣಿಗಾಗಿ ದಿನವಿಡೀ ಕಾದು ಕುಳಿತುಕೊಳ್ಳುವಂತಾಗಿದೆ. ತಾಲ್ಲೂಕು ಕಚೇರಿಯ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯವಿದ್ದು ಅದು ಸದಾ ಗಬ್ಬು ನಾರುತ್ತಿರುವುದರಿಂದ ಉಪನೋಂದಣಾಧಿಕಾರಿಗಳ ಕಚೇರಿಗೆ ಬರುವ ಫಲಾನುಭವಿಗಳು ಮೂಗು ಮುಚ್ಚಿಕೊಂಡು ಶೌಚಕ್ಕೆ ತೆರಳುವಂತಾಗಿದೆ. ಅಂಗವಿಕಲರ ಮಾರ್ಗವಿಲ್ಲದ ಕಾರಣ ನೆಡೆಯಲಾಗದ ಅಂಗವಿಕಲರನ್ನು ಅವರ ಪೋಷಕರೇ ಹೊತ್ತು ಕಚೇರಿಗೆ ಕರೆ ತರಬೇಕಾದ ಸ್ಥಿತಿ ಇದೆ. ಮಹಿಳೆಯರ ವಿಶ್ರಾಂತಿಗಾಗಿ ಪ್ರತ್ಯೇಕ ವ್ಯವಸ್ಥೆಯಿಲ್ಲದ ಕಾರಣ ಹಾಲುಣಿಸಲು ಕಚೇರಿಯ ಮೂಲೆಯಲ್ಲಿ ಅಂಜಿಕೆಯಿಂದಲೇ ಹಾಲುಣಿಸಬೇಕಾದ ಸ್ಥಿತಿಯಿದೆ. 2023ರ ಅಕ್ಟೋಬರ್ನಿಂದ ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟುಗೊಳಿಸಿದೆ. ಆದರೆ ತೆರಿಗೆ ಪಾವತಿಸುವ ತೆರಿಗೆದಾರರಿಗೆ ಮಾತ್ರ ಕಚೇರಿಯಲ್ಲಿ ಕನಿಷ್ಟ ಮೂಲಸೌಲಭ್ಯಗಳನ್ನು ಒದಗಿಸಿಲ್ಲ. ತುರ್ತಾಗಿ ಮೂಡಿಗೆರೆ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿಗಳ ನೋಂದಣಿಗಾಗಿ ಬರುವ ಅಂಗವಿಕರಿಗೆ ಪ್ರತ್ಯೇಕ ಮಾರ್ಗ ನಿರ್ಮಿಸಬೇಕು ಎಂಬುದು ಅಂಗವಿಕಲರ ಒತ್ತಾಯ. ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ನಿರ್ಮಿಸಿ ಅದರಲ್ಲಿ ಮಕ್ಕಳಿಗೆ ಹಾಲುಣಿಸಲು ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಬೇಕು. ಕಚೇರಿಯಲ್ಲಿ ಆಸನಗಳ ವ್ಯವಸ್ಥೆ ಮಾಡಿದ್ದರೂ ಆಸ್ತಿಗಳ ನೋಂದಣಿಗಾಗಿ ಕುಟುಂಬದ ಸದಸ್ಯರೆಲ್ಲರೂ ಬರುವುದರಿಂದ ಇರುವ ಆಸನಗಳ ಸಂಖ್ಯೆ ಕಡಿಮೆಯಾಗುವುದರಿಂದ ಜನ ಹೆಚ್ಚಿದ್ದರೆ ಇಡೀ ದಿನ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಟೋಕನ್ ವ್ಯವಸ್ಥೆಯನ್ನು ಕಲ್ಪಿಸಿ ನೋಂದಣಿಯ ಸಮಯ ನಿಗದಿ ಮಾಡಿದರೆ ಜನಜಂಗುಳಿ ತಪ್ಪಿಸಿ ಜನರಿಗಾಗುವ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ಸ್ಮಿತಾ ನಂದೀಪುರ.
ಕಡೂರು: ತಾಲ್ಲೂಕಿನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಜಾಗದ್ದೇ ಕೊರತೆ. ಕಿಷ್ಕಿಂದೆಯಂತಹ ಜಾಗದಲ್ಲಿಯೇ ಎಲ್ಲ ವಿಭಾಗಗಳಿವೆ. ಇ.ಸಿ ಪಡೆಯುವವರು ಕ್ರಯಪತ್ರ ವಿಲ್ ಆಧಾರ ಮದುವೆ ನೋಂದಣಿಗೆ ಬರುವುದರಿಂದ ಪ್ರತಿ ದಿನ ಜನಸಂದಣಿ ಹೆಚ್ಚಿರುತ್ತದೆ. ಜಮೀನು ಖರೀದಿಸಿದವರು ನೋಂದಣಿ ಮಾಡಿಸಿದ ನಂತರ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿಸಲು ಕಾಯಬೇಕಾದ ಪರಿಸ್ಥತಿಯಿದೆ. ಉಪನೊಂದಣಾಧಿಕಾರಿ ಕಚೇರಿ ತಾಲ್ಲೂಕು ಕಚೇರಿಯ ಮೇಲ್ಭಾಗದಲ್ಲಿ ಇರುವುದು ಹಿರಿಯ ನಾಗರಿಕರಿಗೆ ಮಹಿಳೆಯರಿಗೆ ತ್ರಾಸದಾಯಕವಾಗಿದೆ. ಮೇಲಂತಸ್ತಿಗೆ ಸುಮಾರು 40 ಮೆಟ್ಟಿಲು ಹತ್ತಬೇಕಾಗಿದೆ. ಅಂಗವಿಕಲರಿಗೆ ವ್ಹೀಲ್ಚೇರ್ ವ್ಯವಸ್ಥೆಯಿಲ್ಲ. ರ್ಯಾಂಪ್ ಇಲ್ಲದಿರುವುದರಿಂದ ಅಂಗವಿಕಲರು ಮತ್ತು ವೃದ್ಧರನ್ನು ಕುರ್ಚಿ ಮೇಲೆ ಹೊತ್ತೊಯ್ಯುವ ಅನಿವಾರ್ಯ ಪರಿಸ್ಥಿತಿಯಿದೆ. ದಲ್ಲಾಳಿಗಳ ಕಾರುಬಾರು ಬಹಳ ಹೆಚ್ಚಾಗಿದೆಯೆಂಬ ಮಾತು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಶೌಚಾಲಯ ವ್ಯವಸ್ಥೆಯಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿದ್ದರೂ ಸಮರ್ಪಕ ನಿರ್ವಹಣೆಯಿಲ್ಲ. ಈ ಕಚೇರಿಗೆ ಬರುವವರ ವಾಹನ ನಿಲ್ಲಿಸಲು ಸೂಕ್ತ ಸ್ಥಳಾವಕಾಶವಿಲ್ಲದೆ ರಸ್ತೆಯಲ್ಲೆ ವಾಹನ ನಿಲುಗಡೆ ಮಾಡಲಾಗುತ್ತಿದೆ. ತಾಲ್ಲೂಕು ಕಚೇರಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಸದಾ ಕಿರಿಕಿರಿ ಉಂಟಾಗುತ್ತದೆ. ಮೇಲಂತಸ್ತಿನಲ್ಲಿರುವ ಈ ಕಚೇರಿಯನ್ನು ನೆಲಮಹಡಿಗೆ ಅಥವಾ ಬೇರೆಗೆ ಸ್ಥಳಾಂತರ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.