ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಬಹುತೇಕ ಕ್ಯಾಮರಾ ಕಣ್ಗಾವಲಿನಲ್ಲಿ ನಡೆಯಲಿದೆ. 150ಕ್ಕೂ ಹೆಚ್ಚು ಕ್ಯಾಮರಾಗಳು ಚುನಾವಣಾ ಪ್ರಕ್ರಿಯೆ, ನೀತಿ ಸಂಹಿತೆ ಪಾಲನೆ ಮೇಲೆ ಕಣ್ಣಿಡಲಿವೆ
ಚುನಾವಣೆ ಪ್ರಕ್ರಿಯೆಗಳೆಲ್ಲವೂ ಕ್ಯಾಮರಾ ಕಣ್ಗಾವಲಿನಲ್ಲೆ ನಡೆಯಬೇಕೆಂಬುದು ಚುನಾವಾಣಾ ಆಯೋಗ ಸೂಚನೆ ಇದೆ. ಅದರಂತೆ ಸದ್ಯ ಜಿಲ್ಲೆಯ 22 ಚೆಕ್ಪೋಸ್ಟ್ಗಳಲ್ಲಿ ಎಲ್ಲವೂ ಕ್ಯಾಮರ ಕಣ್ಣಿನ ಅಡಿಯಲ್ಲೆ ನಡೆಯುತ್ತಿದೆ.
ಸದ್ಯ ಜಿಲ್ಲೆಯಲ್ಲಿ 22 ಚೆಕ್ಪೋಸ್ಟ್ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 18 ಅಂತರ ಜಿಲ್ಲಾ ಚೆಕ್ಪೋಸ್ಟ್ಗಳಾಗಿದ್ದು, ಜಿಲ್ಲೆಯ ಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾಲ್ಕು ಚೆಕ್ಪೋಸ್ಟ್ಗಳು ಜಿಲ್ಲೆಯೊಳಗೇ ಸೂಕ್ಷ್ಮ ಪ್ರದೇಶದಲ್ಲಿವೆ. ಈ ಚೆಕ್ಪೋಸ್ಟ್ಗಳಲ್ಲಿ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ.
ಪೊಲೀಸ್, ಅಬಕಾರಿ, ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ತಂಡಕ್ಕೆ ತಲಾ ಒಬ್ಬ ಖಾಸಗಿ ಛಾಯಾಗ್ರಹಕರನ್ನು ಒದಗಿಸಲಾಗಿದೆ. ವಾಹನ ತಪಾಸಣೆ ವೇಳೆ ಎಲ್ಲವನ್ನೂ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿದೆ. ಕ್ಯಾಮೆರಾಗಳನ್ನು ಖಾಸಗಿಯವರಿಂದ ಬಾಡಿಗೆ ಪಡೆಯಲಾಗಿದ್ದು, ಕ್ಯಾಮೆರಾ ಸಹಿತ ಬಂದು ಚಿತ್ರೀಕರಿಸಿ ಜಿಲ್ಲಾಡಳಿತಕ್ಕೆ ಒದಗಿಸುವುದು ಈ ಕೆಲಸದ ಗುತ್ತಿಗೆ ಪಡೆದವರ ಜವಾಬ್ದಾರಿ.
ಪ್ರತಿ ಚುನಾವಣೆಯಲ್ಲೂ ಕ್ಯಾಮೆರಾಗಳನ್ನು ಬಾಡಿಗೆ ಪಡೆದು ನಿರ್ವಹಣೆ ಮಾಡಲಾಗುತ್ತಿದೆ. ಈ ಬಾರಿಯೂ ಅದೇ ರೀತಿ 22 ಚೆಕ್ಪೋಸ್ಟ್ ಮತ್ತು 5 ಸಂಚಾರಿ ತನಿಖಾ ತಂಡಕ್ಕೆ ತಲಾ ಒಂದರಂತೆ ಒಟ್ಟು 27 ಕ್ಯಾಮೆರಾಗಳನ್ನು ಸದ್ಯಕ್ಕೆ ಬಾಡಿಗೆಗೆ ಪಡೆಯಲಾಗಿದೆ.
ಚುನಾವಣಾ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ದಿನದಿಂದ 27 ಕ್ಯಾಮೆರಾ ಕಣ್ಗಾವಲಿದೆ. ಮತದಾನದ ದಿನದಂದು ಇನ್ನೂ 120ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಪಡೆದುಕೊಳ್ಳಲು ಜಿಲ್ಲಾಡಳಿತ ಸಜ್ಜಾಗಿದೆ. ಅದಕ್ಕೂ ಟೆಂಡರ್ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಆರಂಭಿಸಿದೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಡೂರು ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರಿದರೆ, ಉಳಿದ ನಾಲ್ಕು ಕ್ಷೇತ್ರಗಳು(ಚಿಕ್ಕಮಗಳುರು, ಶೃಂಗೇರಿ, ಮೂಡಿಗೆರೆ ಮತ್ತು ತರೀಕೆರೆ) ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಮತದಾನ ಮಾತ್ರ ಜಿಲ್ಲೆಯಲ್ಲಿ ನಡೆಯಲಿದ್ದು ಮತ ಎಣಿಕೆ ಉಡುಪಿ ಮತ್ತು ಹಾಸನದಲ್ಲಿ ನಡೆಯಲಿದೆ.
ಆದ್ದರಿಂದ ಮತ ಎಣಿಕೆಗೆ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುವ ಹೊಣೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಇಲ್ಲ. ಮತದಾನ ಪೂರ್ಣಗೊಳಿಸಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಉಡುಪಿ ಮತ್ತು ಹಾಸನದಲ್ಲಿನ ಸ್ಟ್ರಾಂಗ್ ರೂಂಗಳಿಗೆ ಸಾಗಿಸಿದರೆ ಚುನಾವಣಾ ಕಾರ್ಯ ಪೂರ್ಣಗೊಂಡಂತೆ ಆಗಲಿದೆ. ಅಷ್ಟೂ ಕಾರ್ಯಗಳನ್ನು ಕ್ಯಾಮರಾಗಳಲ್ಲಿ ಸೆರೆಹಿಡಿಯಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.