ಚಿಕ್ಕಮಗಳೂರು: ಹಿರೇಮಗಳೂರಿನ ಕೋದಂಡ ರಾಮಚಂದ್ರ ದೇವಸ್ಥಾನದ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ತಿಂಗಳಿಗೆ ₹2 ಸಾವಿರ ತಸ್ತೀಕ್ ಪಾವತಿಸುವ ಬದಲು, ₹7500 ರಂತೆ ಒಂಬತ್ತು ವರ್ಷ ಪಾವತಿಸಿದ್ದ ಮುಜರಾಯಿ ಇಲಾಖೆ, ಹೆಚ್ಚುವರಿ ₹4.74 ಲಕ್ಷ ಹಿಂದಿರುಗಿಸುವಂತೆ ನೋಟಿಸ್ ನೀಡಿದೆ.
2013–14ನೇ ಸಾಲಿನಿಂದ 2016–17ನೇ ಸಾಲಿನ ತನಕ ತಿಂಗಳಿಗೆ ₹2 ಸಾವಿರದಂತೆ ವರ್ಷಕ್ಕೆ ₹24 ಸಾವಿರ ಪಾವತಿಸಬೇಕಿತ್ತು. 2017–18ನೇ ಸಾಲಿನಿಂದ 2021–22ನೇ ಸಾಲಿನ ತನಕ ತಿಂಗಳಿಗೆ ₹4 ಸಾವಿರದಂತೆ ವರ್ಷಕ್ಕೆ ₹48 ಸಾವಿರ ಪಾವತಿಸಬೇಕಿತ್ತು. ಆದರೆ, ವರ್ಷಕ್ಕೆ ₹90 ಸಾವಿರದಂತೆ ಒಂಬತ್ತು ವರ್ಷಗಳಿಗೆ ಒಟ್ಟು ₹8.10 ಲಕ್ಷ ಪಾವತಿಸಲಾಗಿದೆ. ಹೆಚ್ಚುವರಿಯಾಗಿ ತಮ್ಮ ಖಾತೆಗೆ ಜಮೆ ಆಗಿರುವ ₹4.74 ಲಕ್ಷ ಹಿಂದಿರುಗಿಸಬೇಕು ಎಂದು ನೋಟಿಸ್ನಲ್ಲಿ ತಹಶೀಲ್ದಾರ್ ವಿವರಿಸಿದ್ದಾರೆ.
ಕೋದಂಡ ರಾಮಚಂದ್ರ ದೇಗುಲ ‘ಸಿ’ ವರ್ಗಕ್ಕೆ ಸೇರಿದ್ದು, ಒಂಬತ್ತು ವರ್ಷಗಳ ಅವಧಿಯಲ್ಲಿ ಹುಂಡಿ ಹಣ ₹5.98 ಲಕ್ಷ ಸಂಗ್ರಹವಾಗಿದೆ. ಈ ಅವಧಿಯಲ್ಲಿ ವಿದ್ಯುತ್ ಶುಲ್ಕ, ರಥೋತ್ಸವ ಖರ್ಚು, ಅರ್ಚಕರ ವೇತನ ಸೇರಿ ಒಟ್ಟಾರೆ ₹12.96 ಲಕ್ಷ ವೆಚ್ಚವಾಗಿದೆ ಎಂಬುದನ್ನೂ ನೋಟಿಸ್ನಲ್ಲಿ ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರೇಮಗಳೂರು ಕಣ್ಣನ್ ಅವರು, ‘ದೇವಸ್ಥಾನದ ಆದಾಯ ಕಡಿಮೆ ಇದೆ ಎಂಬ ಕಾರಣಕ್ಕೆ ಈ ಹಿಂದೆ ಪಾವತಿಯಾಗಿರುವ ತಸ್ತೀಕ್ ಮೊತ್ತವನ್ನು ಹಿಂದಿರುಗಿಸುವಂತೆ ನೋಟಿಸ್ ನೀಡಿದ್ದಾರೆ. ಆದಾಯ ಕಡಿಮೆ ಇದ್ದ ಕಾರಣಕ್ಕೆ ಹಣ ವಾಪಸ್ ಕೇಳಿದರೆ ಅರ್ಚಕರ ಮನಸ್ಥಿತಿ ಏನಾಗಲಿದೆ’ ಎಂದು ಪ್ರಶ್ನಿಸಿದರು.