ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಆಮ್ಲಜನಕ ವ್ಯವಸ್ಥೆಯ ಕೆಎಸ್ಆರ್ಟಿಸಿ ಬಸ್ಗೆ(ಆಕ್ಸಿಜನ್ ಆನ್ ವೀಲ್ಸ್) ಸೋಮವಾರ ಚಾಲನೆ ನೀಡಿದರು.
ನಾಯೋನಿಕ ಐ ಕೇರ್ ಟ್ರಸ್ಟ್, ಸಿಟ್ರಿಕ್ ಇಂಡಿಯಾ, ಜಿಲ್ಲಾಡಳಿತದ ಸಹಯೋಗದಲ್ಲಿ ಆಮ್ಲಜನಕ ವ್ಯವಸ್ಥೆಯ ಬಸ್ ಸಜ್ಜುಗೊಳಿಸಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಈ ಬಸ್ ಇರಲಿದೆ.
ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ದಟ್ಟಣೆ ಹೆಚ್ಚು ಇದೆ. ಆಸ್ಪತ್ರೆಗೆ ಕರೆತಂದ ಹೊಸ ರೋಗಿಗಳಿಗೆ ಆಮ್ಲಜನಕ ತುರ್ತಾಗಿ ಒದಗಿಸಬೇಕಿದ್ದರೆ, ವಿಳಂಬವಾಗುವುದನ್ನು ತಪಿಸುವ ನಿಟ್ಟಿನಲ್ಲಿ ಬಸ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
‘ಬಸ್ನಲ್ಲಿ ಆಮ್ಲಜನಕ ಕಾನ್ಸಂಟ್ರೆಟರ್ ಅಳವಡಿಸಿದ್ದಾರೆ. ಐವರಿಗೆ ಆಮ್ಲಜನಕ ಕಲ್ಪಿಸಲು ಬಸ್ನಲ್ಲಿ ವ್ಯವಸ್ಥೆ ಇದೆ’ ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್ ಕುಮಾರ್ ತಿಳಿಸಿದರು.
‘ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ನಲ್ಲಿ ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವ್ಯವಸ್ಥೆ ಯಶಸ್ವಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹೇಳಿದರು.
ಚಿಕ್ಕಮಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎನ್.ಉಮೇಶ್ ಅವರು ಆಮ್ಲಜನಕ ಕಾನ್ಸಂಟ್ರೆಟರ್ ಉಪಕರಣ ಮತ್ತು ರೋಗಿಗಳಿಗೆ ಅದನ್ನು ಅಳವಡಿಸುವ ವಿಧಾನ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅವರಿಗೆ ಮಾಹಿತಿ ನೀಡಿದರು. ಶಾಸಕ ಸಿ.ಟಿ.ರವಿ ಇದ್ದಾರೆ.