ಚಿಕ್ಕಮಗಳೂರು: ನಗರದ ಆಶ್ರಯ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಖಾಲಿಯಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯವರು ಸೂಚನೆ ನೀಡಿದ್ದು, ನಾಲ್ವರು ಕೋವಿಡ್ ರೋಗಿಗಳನ್ನು ಸಂಬಂಧಿಕರು ಬೇರೆ ಕಡೆಗೆ ಕರೆದೊಯ್ದಿದ್ದಾರೆ.
ಒಬ್ಬರು ಜಿಲ್ಲಾಸ್ಪತ್ರೆಯ ಕೋವಿಡ್ ಕೇಂದ್ರ, ಮತ್ತೊಬ್ಬರು ಹಾಸನ, ಇಬ್ಬರು ಮಂಗಳೂರಿಗೆ ತೆರಳಿದ್ದಾರೆ.
ಈ ಆಸ್ಪತ್ರೆಯಲ್ಲಿ 45 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಏಳು ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. 'ರಾತ್ರಿ 12 ಗಂಟೆವರೆಗೆ ನಿಭಾಯಿಸಬಹುದಾದಷ್ಟು ಆಮ್ಲಜನಕ ಸಂಗ್ರಹ ಇದೆ. ತುರ್ತಾಗಿ ಆಮ್ಲಜನಕದ 20 ಸಿಲಿಂಡರ್ ಪೂರೈಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ.
ಸದ್ಯಕ್ಕೆ ಆಸ್ಪತ್ರೆಗಳಿಂದ ಐದು ಸಿಲಿಂಡರ್ ಕಡ ತಂದಿದ್ದೇವೆ. ಒಂದು ವೇಳೆ ಸಿಲಿಂಡರ್ ಪೂರೈಕೆಯಾಗದಿದ್ದರೆ ಕೋವಿಡ್ ರೋಗಿಗಳನ್ನು ಜಿಲ್ಲಾಸ್ಪತ್ರೆ ಕೋವಿಡ್ ವಾರ್ಡ್ ಗೆ ಕಳಿಸಬೇಕಾಗುತ್ತದೆ' ಎಂದು ಆಶ್ರಯ ಆಸ್ಪತ್ರೆ ಮುಖ್ಯಸ್ಥ ಡಾ.ಡಿ.ಎಲ್.ವಿಜಯಕುಮಾರ್ 'ಪ್ರಜಾವಾಣಿ'ಗೆ ತಿಳಿಸಿದರು.