ಕೊಪ್ಪ: ‘ಶಾಸಕ ಟಿ.ಡಿ.ರಾಜೇಗೌಡ ಜನವಿರೋಧಿ ಅಷ್ಟೇ ಅಲ್ಲ ರೈತ ವಿರೋಧಿಯೂ ಆಗಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಅವರ ವೈಫಲ್ಯವೇ ಕಾರಣ’ ಎಂದು ಬಿಜೆಪಿಯ ಪಂಚಾಯತ್ ರಾಜ್ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಎಸ್.ಎನ್.ರಾಮಸ್ವಾಮಿ ಆರೋಪಿಸಿದರು.
ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಲೆನಾಡಿನಲ್ಲಿ ಒತ್ತುವರಿ ಜಾಗವನ್ನು ಖುಲ್ಲಾ ಯಾವಾಗ ಮಾಡುತ್ತೀರಿ? ಎಂದು ಕ್ಷೇತ್ರದ ಶಾಸಕರು ವಿಧಾನಸಭೆಯಲ್ಲಿ ಪ್ರಶ್ನಿಸಿದ್ದರು. ಭೂ ಮಂಜೂರಾತಿಗೆ ಅರಣ್ಯ ಇಲಾಖೆ ಒಪ್ಪಿಗೆ ಅಗತ್ಯ. ಈ ಎಲ್ಲಾ ಕಾರಣಕ್ಕಾಗಿಯೇ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದು ದೂರಿದರು.
‘ಹಣ ಕೊಟ್ಟವರಿಗೆ ಮಾತ್ರ ಹಕ್ಕುಪತ್ರ, ಹಣ ನೀಡದವರಿಗೆ ಅರಣ್ಯ ಇಲಾಖೆ ಒಪ್ಪಿಗೆಗೆ ಬರೆಯಲಾಗುತ್ತಿದೆ. ರೈತರ ಪರವಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಜುಲೈ 4 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಹಲವರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜೆ.ಪುಣ್ಯಪಾಲ್, ಎಪಿಎಂಸಿ ಅಧ್ಯಕ್ಷ ಕಲ್ಕೆರೆ ವಿಶ್ವನಾಥ್, ತಾಲ್ಲೂಕು ಬಿಜೆಪಿ ಕಾರ್ಯದರ್ಶಿ ಎಚ್.ಆರ್.ಜಗದೀಶ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ರೇವಂತ್, ಹರಿಹರಪುರ ಹೋಬಳಿ ಘಟಕದ ಅಧ್ಯಕ್ಷ ಅಜಿತ್ ಬಿಕ್ಳಿ, ಸೋಷಿಯಲ್ ಮೀಡಿಯಾ ಉಸ್ತುವಾರಿ ರಂಜಿತ್ ಇದ್ದರು.