ಕಳಸ: ತಾಲ್ಲೂಕಿನಾದ್ಯಂತ ಕಳೆದ 5 ದಿನಗಳಿಂದ ಮೋಡದ ವಾತಾವರಣ, ಅಕಾಲಿಕ ಮುಂದುವರಿದಿದ್ದು, ಕಾಫಿ ಬೆಳೆಗೆ ಸಂಕಷ್ಟ ಎದುರಾಗಿದೆ.
ಅಕಾಲಿಕ ಮಳೆಯಿಂದ ಕಾಫಿ ಗಿಡಗಳಲ್ಲಿ ಅವಧಿಗೆ ಮುನ್ನವೇ ಮೊಗ್ಗು ಅರಳಿದೆ. ದೊಡ್ಡ ಪ್ರಮಾಣದಲ್ಲಿ ಹೂವು ಅರಳುತ್ತಿದ್ದು ಮುಂದಿನ 3 ದಿನ ಗಿಡದಲ್ಲಿ ಕಾಫಿ ಕೊಯ್ಲು ನಿಲ್ಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
‘ಈ ವರ್ಷ ತಕ್ಕ ಮಟ್ಟಿಗೆ ಕಾಫಿ ಫಸಲು ಚೆನ್ನಾಗಿತ್ತು. ಬೆಲೆ ಕೂಡ ಉತ್ತಮ ಮಟ್ಟದಲ್ಲೇ ಇದೆ.ಆದರೆ, ಕಾಫಿ ಕೊಯ್ಯುವ ವೇಳೆಗೆ ಬಂದ ಮಳೆ ಬೆಳೆಗಾರರ ಲೆಕ್ಕಾಚಾರ ಅಡಿಮೇಲು ಮಾಡಿದೆ.
ಬಿಸಿಲಿನ ಕೊರತೆಯಿಂದ ಕಣದಲ್ಲಿ ಒಣಗಲು ಹರಡಿದ್ದ ಕಾಫಿ ಹಣ್ಣು ಬೂಷ್ಟು ಹಿಡಿದಿದೆ. ಇದರಿಂದ ಕಾಫಿ ಗುಣಮಟ್ಟ ಹಾಳಾಗಿದೆ. 8 ದಿನದಲ್ಲೇ ಒಣಗಬೇಕಿದ್ದ ಕಾಫಿ 12 ದಿನ ಕಳೆದರೂ ಒಣಗುತ್ತಿಲ್ಲ. ಕಣದಲ್ಲಿ ಹರಡಲು ಜಾಗವೂ ಇಲ್ಲದೆ ನಮ್ಮ ಚಿಂತೆ ಹೆಚ್ಚಾಗಿದೆ ಎಂದು ಇಡಕಿಣಿಯ ಬೆಳೆಗಾರ ಲಿಂಬೆಕೊಂಡ ಚಂದ್ರಶೇಖರ್ ಹೇಳಿದರು.
ಮೂರು ವರ್ಷಗಳಿಂದ ಪ್ರತಿ ವರ್ಷವೂ ಮಳೆಯು ಕಾಫಿ ಕೊಯ್ಲಿಗೆ ಅಡ್ಡಿ ಮಾಡುತ್ತಾ ನಷ್ಟ ತರುತ್ತಿದೆ.ಹವಾಮಾನ ವೈಪರೀತ್ಯದ ಈ ಸಮಸ್ಯೆಗೆ ಯಾವ ಪರಿಹಾರವೂ ಇಲ್ಲ ಎಂದು ಬೆಳೆಗಾರರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
ಮಳೆಗೆ ಸಿಲುಕಿದ ಕಾಫಿ ಹೆರಕಲು ಕಾರ್ಮಿಕರ ಸಮಸ್ಯೆ ಇದೆ. ಕಾಫಿ ಕೊಯ್ಯುವುದೇ ಹರಸಾಹಸ ಆಗಿರುವಾಗ ನೆಲಕ್ಕೆ ಬಿದ್ದ ಕಾಫಿ ಹೆರಕುವುದು ಅಸಾಧ್ಯ ಎಂದೇ ಬೆಳೆಗಾರರು ಭಾವಿಸಿದ್ದಾರೆ.
ಕಣದಲ್ಲಿ ಬೂಷ್ಟು ತಗುಲಿದ ಕಾಫಿ ಸಿಪ್ಪೆಯ ಸಾಂದ್ರತೆ ಕಡಿಮೆ ಆಗಿ ಚೆರ್ರಿ ಕಾಫಿ ತೂಕದಲ್ಲಿ ಕಡಿಮೆ ಬರುತ್ತದೆ. ಇದರಿಂದ ಶೇ10ರಿಂದ 15ರಷ್ಟು ತೂಕ ಕಡಿಮೆಯಾಗಿ ನಷ್ಟ ಆಗುತ್ತದೆ. ಇದು ಬೆಳೆಗಾರರಿಗೆ ದೊಡ್ಡ ನಷ್ಟ ಎಂದು ಯುವ ಬೆಳೆಗಾರ ವಿಶಾಲ್ ನೋಟದ ಹೇಳಿದರು.
ಕಣದಲ್ಲಿ ಒಣಗಲು ಹರಡಿದ್ದ ಕಾಫಿಗೆ ಬೂಷ್ಟು ತಗುಲಿರುವುದು.
ಮಳೆಗೆ ಸಿಲುಕಿದ ಕಾಫಿಯನ್ನು ಕ್ಯೂರಿಂಗ್ನಲ್ಲಿ ಬೇಳೆ ಮಾಡಿಸಿ ಮಾರಾಟ ಮಾಡಿದರೆ ತಕ್ಕ ಮಟ್ಟಿಗೆ ನಷ್ಟ ಸರಿತೂಗಿಸಬಹುದು.ಆದರೆ, ಸಣ್ಣ ಪ್ರಮಾಣದ ಬೇಳೆಗೆ ಖರೀದಿದಾರರನ್ನು ಹುಡುಕುವುದು ಬೆಳೆಗಾರರಿಗೆ ಸವಾಲು. ಉತ್ತಮ ದರ ಇದ್ದರೂ ಅದು ಬೆಳೆಗಾರರಿಗೆ ಸಿಗದಂತ ಪರಿಸ್ಥಿತಿ ಇದೆ.