ತಾಲ್ಲೂಕು ವ್ಯಾಪ್ತಿಯಲ್ಲಿ ಆಹಾರ ಬೆಳೆ ಭತ್ತ, ವಾಣಿಜ್ಯ ಬೆಳೆಗಳಾದ ಅಡಿಕೆ, ರಬ್ಬರ್, ಶುಂಠಿ, ಕಾಳುಮೆಣಸು ಮತ್ತಿತರ ಬೆಳೆ ಬೆಳೆಯಲಾಗುತ್ತಿದೆ. ಮಲೆನಾಡಿನ ಭಾಗದಲ್ಲಿ ಅತಿಹೆಚ್ಚು ಮಳೆಯಾಗುವುದರಿಂದ ಮಣ್ಣಿನ ಪೌಷ್ಟಿಕಾಂಶ ಕೊಚ್ಚಿ ಹೋಗುತ್ತದೆ. ಇಳುವರಿ ಪ್ರಮಾಣದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಮಣ್ಣಿನಲ್ಲಿರುವ ಪೌಷ್ಟಿಕಾಂಶ ಕೊರತೆಯನ್ನು ನೀಗಿಸುವುದು ಅವಶ್ಯಕ. ಪ್ರತಿ ವರ್ಷವೂ ಬೆಳೆ ಕಟಾವು ಆದ ಕೂಡಲೇ ಮಣ್ಣು ಪರೀಕ್ಷೆ ಮಾಡಿಸಿದರೆ ಮಳೆಗಾಲದ ಆರಂಭದಲ್ಲಿ ಮಣ್ಣಿಗೆ ಪೋಷಕಾಂಶ ಒದಗಿಸಲು ಸಹಾಯಕವಾಗುತ್ತದೆ.