ಚಿಕ್ಕಮಗಳೂರು: ಮಳೆನಾಡು, ಗಿರಿಶಿಖರಗಳ ಸಾಲು, ಝರಿ–ತೊರೆಗಳ ತವರು ಎಂದೆಲ್ಲ ಕರೆಸಿಕೊಳ್ಳುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಬಾರಿ ತಾಪಮಾನ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.
ಇದೇ ಮೊದಲ ಬಾರಿಗೆ ಜಿಲ್ಲೆಯ ಸರಾಸರಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇತ್ತ ಅಜ್ಜಂಪುರ, ತರೀಕೆರೆ ಭಾಗದಲ್ಲಿ 39 ಡಿಗ್ರಿ ಸೆಲ್ಸಿಯಸ್ ಮುಟ್ಟಿದೆ. ಮಲೆನಾಡು ಭಾಗದಲ್ಲೂ ತಾಪಮಾನ ಹೆಚ್ಚಾಗಿದ್ದು, ಜನ ಜೀವನ ಕಷ್ಟವಾಗಿದೆ.
ಬೆಳಿಗ್ಗೆ 8 ಗಂಟೆ ದಾಟಿದರೆ ಬಿರು ಬಿಸಿಲು ಆರಂಭವಾಗುತ್ತದೆ. ಮಧ್ಯಾಹ್ನ 12 ಗಂಟೆ ದಾಟಿದರೆ ನೆರಳಿನಿಂದ ಹೊರ ಬರುವುದೇ ಕಷ್ಟವಾದರೆ, ರಾತ್ರಿ ಮನೆಯೊಳಗೆ ಕೂರುವುದು ಇನ್ನೂ ಕಷ್ಟವಾಗಿದೆ. ಅಜ್ಜಂಪುರ, ಶಿವನಿ ಸುತ್ತಮುತ್ತ ಮಧ್ಯಾಹ್ನ ಬಿಸಿಗಾಳಿ ಕೂಡ ಜನರನ್ನು ನಿತ್ರಾಣವಾಗಿಸುತ್ತಿದೆ.
1991ರಿಂದ ಈವರೆಗಿನ ಅಂಕಿ–ಅಂಶ ಗಮನಿಸಿದರೆ ಸಾಮಾನ್ಯವಾಗಿ ಬಿರು ಬಿಸಿಲು ಏಪ್ರಿಲ್ನಲ್ಲಿ ಹೆಚ್ಚಾಗುತ್ತದೆ. ಈ ಬಾರಿ ಮಾರ್ಚ್ನಲ್ಲೇ ಬಿಸಿಲು ಹೆಚ್ಚಾಗಿತ್ತು, ಏಪ್ರಿಲ್ನಲ್ಲಿ ಇನ್ನೂ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ ಇದೇ ಮೊದಲ ಬಾರಿಗೆ 98 ಡಿಗ್ರಿ ಸೆಲ್ಸಿಯಸ್ ದಾಟಿದೆ. ಜಿಲ್ಲೆಯ ಸರಾಸರಿ ತಾಪಮಾನ ಗರಿಷ್ಟ ಎಂದರೆ 2012ರ ಏಪ್ರಿಲ್ 8 ರಂದು 36.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ವರ್ಷ 38 ಡಿಗ್ರಿ ಸೆಲ್ಸಿಯಸ್ ದಾಟಿದೆ.
ದೇಹ ತಂಪಾಗಿಸಿಕೊಳ್ಳಲು ಎಳನೀರು, ತಂಪು ಪಾನೀಯಕ್ಕೆ ಜನ ಮುಗಿ ಬಿದ್ದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ಆಟೊ ಚಾಲಕರು ನೀರುಣಿಸುವ ಕಾರ್ಯವನ್ನು ಮಾಡಿದ್ದಾರೆ.
ಪೂರಕ ಮಾಹಿತಿ: ಕೆ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು
ನೀರು ಮಜ್ಜಿಗೆ ಎಳೆನೀರು ಹಣ್ಣಿನ ರಸ ಹೆಚ್ಚಾಗಿ ಕುಡಿಯಬೇಕು.
ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು ಹಣ್ಣುಗಳನ್ನು ಸೇವಿಸಬೇಕು.
ಸಡಿಲವಾದ ತೆಳುಬಣ್ಣದ ಹತ್ತಿ ಬಟ್ಟೆ ಗಾಳಿಯಾಡುವ ಪಾದರಕ್ಷೆ ಧರಿಸುವುದು ಉತ್ತಮ.
ಕಾರ್ಮಿಕರು ಬೆಳಿಗ್ಗೆ 11 ಗಂಟೆ ಒಳಗೆ ಹಾಗೂ ಸಂಜೆ 4 ಗಂಟೆ ನಂತರ ದುಡಿಯುವುಸು ಒಳ್ಳೆಯದು.
ಟೀ ಕಾಫಿ ಮತ್ತು ಹೆಚ್ಚು ಸಕ್ಕರೆ ಅಂಶ ಹೊಂದಿರುವ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರಬೇಕು.
ವೃದ್ಧರು ಗರ್ಭಿಣಿಯರು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಮಧ್ಯಾಹ್ನ ಮನೆಯಿಂದ ಹೊರಗೆ ಬರದಿರುವುದು ಉತ್ತಮ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.