ತರೀಕೆರೆ: ‘ಮಣ್ಣಿನ ಸವಕಳಿ ಹಾಗೂ ತೇವಾಂಶದ ಕೊರತೆಯನ್ನು ಎದುರಿಸುತ್ತಿರುವ ತಾಲ್ಲೂಕಿನ ರೈತರ ಜಮೀನುಗಳಲ್ಲಿ ಸರ್ಕಾರದ ಅನುದಾನದಿಂದ ಬದು ನಿರ್ಮಿಸಲು ಅವಕಾಶವಿದ್ದು, ರೈತರು ಸಾಮೂಹಿಕವಾಗಿ ಈ ಅವಕಾಶವನ್ನು ಬಳಸಿಕೊಳ್ಳಬೇಕು’ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ತಾಲ್ಲೂಕಿನ ವಿಠಲಾಪುರ ಗ್ರಾಮದ ರೈತರ ಜಮೀನಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ‘ಬದು ನಿರ್ಮಾಣ ಯೋಜನೆಯ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಅವರ ಮಾತನಾಡಿ, ‘ತಿರುವು ಗಾಲುವೆ, ಕೃಷಿ ಹೊಂಡ, ಚೆಕ್ ಡ್ಯಾಂ ಗಳನ್ನು ₹ 6.94 ಲಕ್ಷ ವೆಚ್ಚದಲ್ಲಿ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಸಣ್ಣ ರೈತರ ಜಮೀನುಗಳಿಗೆ ಬದು ನಿರ್ಮಾಣವು ಅವಶ್ಯಕವಾಗಿದೆ. ಇದರಿಂದಾಗಿ ಶೇ 15ರಷ್ಟು ಇಳುವರಿ ಹೆಚ್ಚಿಸಿಕೊಳ್ಳಬಹುದಾಗಿದೆ. ಒಂದು ಎಕರೆ ಪ್ರದೇಶದಲ್ಲಿ 100 ಮೀ. ಬದು ನಿರ್ಮಾಣದಿಂದ ಪ್ರತಿ ಎಕರೆಗೆ ಗರಿಷ್ಠ 2ಲಕ್ಷ ಲೀ. ಮಳೆ ನೀರು ಸಂಗ್ರಹವಾಗುತ್ತದೆ. ಸಣ್ಣ ರೈತರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಅಮೃತಾಪುರ, ಹಾದಿಕೆರೆ, ನೇರಲಕೆರೆ, ಹುಣಸಘಟ್ಟ ಗ್ರಾಮಗಳಲ್ಲಿ ಈಗಾಗಲೇ ಕಾಮಗಾರಿ ನಡೆಯುತ್ತಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಆನಂದಪ್ಪ ಮಾತನಾಡಿ, ‘ರೈತರು ಬದುಗಳ ಮೇಲೆ ಹುಲ್ಲು, ತೋಟಗಾರಿಕೆ ಹಾಗೂ ಅರಣ ಸಸಿಗಳನ್ನು ನಾಟಿ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಸದಸ್ಯ ಹಾಲಾನಾಯ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ಸದಸ್ಯರಾದ ಸುಧಾಕರ್, ಓಂಕಾರಪ್ಪ, ಇಒ ವಿಶಾಲಾಕ್ಷಮ್ಮ, ಕೃಷಿ ಸಹಾಯಕ ನಿರ್ದೆಶಕ ಟಿ.ಚಿತ್ರಸೇನ, ಕೃಷಿ ಅಧಿಕಾರಿ ಕರಿಯಪ್ಪ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.