ಕಡೂರು: ತಾಲ್ಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಪೊಲೀಸ್ ರಕ್ಷಣೆಯಲ್ಲಿ ಹೈಟೆನ್ಷನ್ ಲೈನ್ ಅಳವಡಿಸಲು ಬಂದ ಖಾಸಗಿ ಸೌರಶಕ್ತಿ ಕಂಪನಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಸೋಮವಾರ ಬೆಳಿಗ್ಗೆ ಏಕಾಏಕಿ ಪೊಲೀಸರ ರಕ್ಷಣೆ ಜೊತೆ ಬಂದ ಸೌರಶಕ್ತಿ ಕಂಪನಿಯ ನೌಕರರು ತಂತಿ ಅಳವಡಿಸಲು ಮುಂದಾದಾಗ, ಅಲ್ಲಿದ್ದ ರೈತರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಿರಂಜನ ಮೂರ್ತಿ ಮತ್ತು ಗ್ರಾಮಪಂಚಾಯಿತಿ ಸದಸ್ಯ ಟಿ.ಬಿ.ದಿನೇಶ್ ನೇತೃತ್ವದಲ್ಲಿ ಪ್ರತಿಭಟಿಸಿದರು.
ಆಗ ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು. ರೈತ ಮಹೇಶ್ವರಪ್ಪ ಎಂಬುವರು ವಿದ್ಯುತ್ ಗೋಪುರವನ್ನು ಏರಿ ಪ್ರತಿಭಟನೆ ನಡೆಸಿರು.
‘ಕಂಪನಿ ಗ್ರಾಮದ ಬಳಿ ಹೈ ಟೆನ್ಷನ್ ಲೈನ್ ಅಳವಡಿಸುವ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಸೆ.20ಕ್ಕೆವಿಚಾರಣೆ ಇದೆ. ದಯವಿಟ್ಟು ಪೊಲೀಸರು ಮಧ್ಯೆ ಪ್ರವೇಶಿಸಬೇಡಿ. ನಾಳೆ ವಿಚಾರಣೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ’ ಎಂದು ಸ್ಥಳದಲ್ಲಿದ್ದ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತಿತರರ ಪೊಲೀಸ್ ಅಧಿಕಾರಿಗಳ ಬಳಿ ರೈತರು ಮನವಿ ಮಾಡಿಕೊಂಡರು.ಈ ಸಮಯದಲ್ಲಿ ರೈತರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಪೊಲೀಸರು ಮತ್ತು ರೈತರ ನಡುವೆ ತಳ್ಳಾಟವೂ ನಡೆಯಿತು.
ನಂತರ ರೈತ ಸಂಘದ ನಿರಂಜನ ಮೂರ್ತಿ, ‘ನಾವೆಲ್ಲರೂ ಬಂದಿರುವುದು ನ್ಯಾಯ ಕೇಳಲು. ರೈತರನ್ನು ಎಳೆದಾಡಬೇಡಿ. ನಾವೇ ಬರುತ್ತೇವೆ ಎಂದರು.
ಅವರೂ ಸೇರಿ 20 ಕ್ಕೂ ಹೆಚ್ಚು ಜನರು ಪೊಲೀಸ್ ವ್ಯಾನಿನಲ್ಲಿ ಪೊಲೀಸ್ ಠಾಣೆಗೆ ತೆರಳಿದರು.