ಹುಲಿ ಸ್ಥಳಾಂತರಿಸಲು ಆಗ್ರಹ: ಎರಡು ವರ್ಷಗಳಿಂದ ಬಿ.ಹೊಸಹಳ್ಳಿ, ಹೊಕ್ಕಳ್ಳಿ, ಭಾರತೀಬೈಲ್, ಬಿಲ್ಲೋಟ ಭಾಗದಲ್ಲಿಹುಲಿ ಸಂಚರಿಸುತ್ತಿದ್ದು ಈವರೆಗೆ ಮೇಯಲು ಹೋಗಿದ್ದ ಹಲವು ದನಗಳು ಹುಲಿಯ ಪಾಲಾಗಿವೆ. ಅರಣ್ಯ ಇಲಾಖೆ ಬಿ.ಹೊಸಳ್ಳಿ, ಬಾನಳ್ಳಿ, ಹೊಕ್ಕಳಿ ಭಾಗದಲ್ಲಿ ಕ್ಯಾಮೆರಾ ಕಣ್ಗಾವಲು ಇರಿಸಿ ಹುಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ಕಾಡಾನೆ ಕಾಟ ಮತ್ತೊಂದೆಡೆ ಹುಲಿಯ ಭಯದಿಂದ ಗ್ರಾಮಸ್ಥರು ದಿನದೂಡುವಂತಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹುಲಿ ಸ್ಥಳಾಂತರ ಮಾಡಿ ಜನರು ನೆಮ್ಮದಿಯಿಂದ ಬದುಕಲು ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.