ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಲಕ್ಷ್ಮೀಶನಗರ ನಿವಾಸಿ ಧರ್ಮ ಜಾಗರಣ ಸಮಿತಿ ಕಾರ್ಯಕರ್ತ ಡಾ.ಶಶಿಧರ ಚಿಂದಿಗೆರೆ ಜಯಣ್ಣ ಅವರ ಕಾರಿನ ಮೇಲೆ ಜಿಹಾದ್, ಕೊಲೆ ಬೆದರಿಕೆ ಬರಹ ಗೀಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಬಾಲಕರನ್ನು ಪತ್ತೆ ಮಾಡಿದ್ದಾರೆ.
ಕಡೂರು ಠಾಣೆ ಪಿಎಸ್ಐ ಎನ್.ಕೆ.ರಮ್ಯಾ ಮತ್ತು ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ದಾಖಲಾದ 48 ಗಂಟೆಯೊಳಗೆ ಪತ್ತೆ ಹಚ್ಚಿದ್ದಾರೆ.
‘ರಸ್ತೆ ಬದಿ ನಿಲ್ಲಿಸಿರುವ ಕಾರು ಚೆನ್ನಾಗಿದೆ. ನಾವು ಇಂಥ ಕಾರು ತೆಗೆದುಕೊಳ್ಳಲು ಆಗಲ್ಲ. ಕಾರು ತೆಗೆದುಕೊಳ್ಳದಿದ್ದರೂ ಪರವಾಗಿಲ್ಲ, ಈ ಕಾರನ್ನು ಹಾಳುಗೆಡವೋಣ ಎಂದು ಬಾಲಕರು ಕೃತ್ಯ ಎಸಗಿರುವುದು ಕಂಡು ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
24ರಂದು ಕಡೂರಿನ ಲಕ್ಷ್ಮೀಶನಗರ ಶಶಿಧರ್ ಅವರು ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಗಳ ಗಾಳಿ ಬಿಟ್ಟು, ಬಾನೆಟ್, ಗಾಜು, ಎಡ ಬಾಗಿಲ ಮೇಲೆ ಜಿಹಾದ್, ಕೊಲೆ ಬೆದರಿಕೆ ಬರಹ ಗೀಚಿದ್ದಾರೆ ಎಂದು ದೂರು ಕಡೂರು ಠಾಣೆಯಲ್ಲಿ ದೂರು ನೀಡಿದ್ದರು.
ಐಪಿಸಿ 427 (ಸಾರ್ವಜನಿಕರ ಆಸ್ತಿಗೆ ನಷ್ಟು ಉಂಟುಮಾಡಿದ), 505(2) – ( ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಉಂಟು ಮಾಡುವ ಹೇಳಿಕೆ ಪ್ರಚುರಪಡಿಸಿದ), 506 (ಜೀವ ಬೆದರಿಕೆ) ಪ್ರಕರಣ ದಾಖಲಿಸಲಾಗಿತ್ತು.