ತರೀಕೆರೆ: ವಾರದ ಹಿಂದೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹45 ಇದ್ದ ಹಸಿಮೆಣಸಿಕಾಯಿ ದರವು ₹25ಕ್ಕೆ ಕುಸಿದಿದೆ. ಸಾಂಬಾರು ಸೌತೆಕಾಯಿ, ತೊಂಡೆಕಾಯಿ, ಕೋಸು, ಹಾಗಲಕಾಯಿ, ನುಗ್ಗೆಕಾಯಿ, ಜವಳಿಕಾಯಿ, ಹುರುಳಿಕಾಯಿ, ಮೂಲಂಗಿ ದರ ಸ್ಥಿರವಾಗಿದೆ.
₹30 ಇದ್ದ ಹೀರೆಕಾಯಿ ದರ ₹20ಕ್ಕೆ , ಟೊಮೊಟೂ ₹40ರಿಂದ ₹25ಕ್ಕೆ ಇಳಿದಿದೆ. ತರಕಾರಿ ತುಸು ಅಗ್ಗವಾದರು ಸೊಪ್ಪು ಸ್ವಲ್ಪ ದುಬಾರಿಯಾಗಿದೆ. ಕೊತ್ತಂಬರಿ, ಪುದಿನ ಹಾಗೂ ಮೆಂತೆ ಸೊಪ್ಪು ಕಟ್ಟಿಗೆ ₹4ರಿಂದ₹5ಕ್ಕೆ ಏರಿಕೆಯಾಗಿದೆ.
ಬ್ಯಾಡಗಿ ಮೆಣಸಿನಕಾಯಿ ₹220 ರಿಂದ ₹250ಕ್ಕೆ ಏರಿಕೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿಗೆ ₹ 35 ರಿಂದ 25ಕ್ಕೆ ಇಳಿದಿದರೆ, ಸೇಲಂ (ಪೂಜೆ) ₹ 20ರಿಂದ ₹10ಕ್ಕೆ, ಪಚ್ಚೆ ಬಾಳೆ ₹35 ರಿಂದ ₹ 25ಕ್ಕೆ ಇಳಿದಿವೆ.
ಬಯಲುಸೀಮೆ ಅಜ್ಜಂಪುರ, ಕಡೂರು, ಬೀರೂರು, ಸಖರಾಯಪಟ್ಟಣ ಭಾಗದಲ್ಲಿ ಮುಂಗಾರು ಶುರುವಾಗಿದ್ದು, ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಪೊರೈಕೆಯಾಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿ ಇರ್ಫಾನ್.
ಒಟ್ಟಾರೆ ತರಕಾರಿ ಧಾರಣೆ ಕುಸಿದಿದೆ. ಮಳೆ ಕಾರಣ ತರಕಾರಿಯ ತಾಜಾತನವೂ ಇಲ್ಲ ಎಂದು ಗ್ರಾಹಕಿ ವಂದನಾ ತಿಳಿಸಿದರು.
ಗ್ರಾಹಕರು ನಿರಾಳ
ಕಡೂರು: ಇಲ್ಲಿನ ಮಾರುಕಟ್ಟೆಯಲ್ಲಿ ವಾರದಿಂದ ತರಕಾರಿ ಬೆಲೆಗಳು ತುಸು ಇಳಿದಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ₹100 ಇದ್ದ ಟೊಮೆಟೊ ಬೆಲೆ ₹25 ರಿಂದ ₹30 ಇಳಿದಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ಬೀನ್ಸ್ ₹40, ಮೆಣಸಿನಕಾಯಿ ₹30, ಕೋಸು ₹40, ಹೂ ಕೋಸು ₹35, ನುಗ್ಗೆಕಾಯಿ ₹40,ಬೆಂಡೆಕಾಯಿ ₹30ಕ್ಕೆ ಮಾರಾಟವಾಗಿದೆ.
₹20ಕ್ಕೆ 3 ಕೆ.ಜಿ. ಇದ್ದ ಈರುಳ್ಳಿ ದರವು ಕೆ.ಜಿ.ಗೆ ₹15 ರಿಂದ ₹20 ಏರಿಕೆಯಾಗಿದ್ದು, ರೈತರಿಗೆ ಆಶಾದಾಯಕ ಎಂದು ಕಡೂರು ಎಪಿಎಂಸಿ ಸಗಟು ತರಕಾರಿ ವರ್ತಕ ಎಚ್.ಆರ್.ದೇವರಾಜ್ ತಿಳಿಸಿದರು.