ತರೀಕೆರೆ: ತಾಲ್ಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಮಂಗಳವಾರ ನಾಲ್ಕು ಕ್ರೇಸ್ಟ್ ಗೇಟ್ಗಳನ್ನು ತೆರೆಯುವ ಮೂಲಕ ನೀರನ್ನು ಹೊರಕ್ಕೆ ಬಿಡಲಾಯಿತು. ನಾಲ್ಕು ವರ್ಷಗಳ ನಂತರ ನೀರನ್ನು ಹೊರ ಬಿಡಲಾಗಿದ್ದು, ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಮಧ್ಯಾಹ್ನ 1.30ಕ್ಕೆ ಜಲಾಶಯದ ನೀರನ್ನು ಹೊರ ಬಿಡುವುದಾಗಿ ಮೊದಲೇ ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ರೈತರು ಸೇರಿದಂತೆ ಸಾವಿರಾರು ಮಂದಿ ಸ್ಥಳದಲ್ಲಿ ಉಪಸ್ಥಿತರಿದ್ದು, ನೀರು ಹರಿಯುವುದನ್ನು ಕಣ್ತುಂಬಿಕೊಂಡರು.
ಜಲಾಶಯದ ನೀರಿನ ಮಟ್ಟ ಗರಿಷ್ಟ 186 ಅಡಿಗಳಷ್ಟಿದ್ದು, ನೀರು ಹೊರ ಬಿಡುವ ವೇಳೆಗೆ 183.8 ಅಡಿ ಸಂಗ್ರಹವಾಗಿತ್ತು. ಮೊದಲಿಗೆ 2ನೇ ಕ್ರೇಸ್ಟ್ ಗೇಟ್, ನಂತರ 3ನೇ ಕ್ರೇಸ್ಟ್ ಗೇಟ್, ಬಳಿಕ 1ನೇ ಕ್ರೇಸ್ಟ್ ಗೇಟ್ ಹಾಗೂ ಕೊನೆಯದಾಗಿ 4ನೇ ಕ್ರೇಸ್ಟ್ ಗೇಟ್ಗಳನ್ನು ತೆರೆಯಲಾಗಿದೆ.
ನಾಲ್ಕು ಕ್ರೇಸ್ಟ್ ಗೇಟ್ಗಳಿಂದ ಸುಮಾರು 6,200 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಜಲಾಶಯಕ್ಕೆ 23 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭದ್ರಾ ಜಲಾಶಯದ ಮುಖ್ಯ ಎಂಜಿನಿಯರ್ ಆರ್.ಪಿ.ಕುಲಕರ್ಣಿ, ಅಧೀಕ್ಷಕ ಎಂಜಿನಿಯರ್ ಎಚ್.ಕೆ.ದಿವಾಕರನಾಯ್ಕ, ಕಾರ್ಯಪಾಲಕ ಎಂಜಿನಿಯರ್ ಪಿ.ವೆಂಕಟೇಶ್, ಮಂಜುನಾಥ್, ತಾಂತ್ರಿಕ ಸಹಾಯಕ ನಟರಾಜ್ ಪಾಟೀಲ್ ಇದ್ದರು.