ಕಡೂರು: ಇದೇ 30 ರಿಂದ ಫೆಬ್ರವರಿ 7ರವರೆಗೆ ಪಟ್ಟಣದಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ಅದ್ದೂರಿ ಸಿದ್ಧತೆ ನಡೆದಿದೆ.
45 ಎಕರೆ ವಿಸ್ತೀರ್ಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಕಾರ್ಯ ಸಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳನ್ನು ಡಾಂಬರೀಕರಣಗೊಳಿಸುತ್ತಿದ್ದು, 9 ದಿನಗಳ ಕಾಲ ಪಟ್ಟಣಕ್ಕೆ ಹರಿದು ಬರುವ ಸಾವಿರಾರು ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಗೆ 10 ನೀರಿನ ಟ್ಯಾಂಕ್ಗಳನ್ನಲ್ಲದೆ 13 ಟ್ರ್ಯಾಕ್ಟರ್ ಟ್ಯಾಂಕ್ಗಳಿಗೆ ನಲ್ಲಿಗಳನ್ನು ಅಳವಡಿಸಿ ನೀರಿಗೆ ಸಮಸ್ಯೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ.
30 ಸೋಡಿಯಂ ಲೈಟ್ಗಳನ್ನು ಪುರಸಭೆ ನೀಡಿದ್ದು, ಮಹಾ ಮಂಟಪದ ಸುತ್ತಮುತ್ತ ನೂರಾರು ಮಳಿಗೆಗಳನ್ನು ತೆರೆಯಲು ಅನು ಮತಿ ನೀಡಲಾಗಿದೆ. ಹೋಟೆಲ್, ಪುಸ್ತಕದ ಅಂಗಡಿ, ಕೃಷಿ, ತೋಟಗಾರಿಕೆ, ರೈತರಿಗೆ ಮಾಹಿತಿ, ಸಾಹಿತ್ಯ, ಜನಪದ, ಕ್ರೀಡೆಗಳಿಗೆ ಮೀಸಲಾಗಿರುವ ವಿಷಯಗಳ ಕುರಿತು ಮಾಹಿತಿ ದೊರೆಯಲಿದೆ.
ಪಟ್ಟಣದ ಮತ್ತು ಮಹಾಮಂಟಪದ ಸ್ವಚ್ಛತೆಗೆ ಪುರಸಭೆ ಪೌರನೌಕರರು ಮತ್ತು ನೂರಾರು ಕಾರ್ಯಕರ್ತರು ಈಗಾಗಲೇ ಕಾರ್ಯ ಪ್ರವೃತ್ತರಾಗಿ ಪಟ್ಟಣವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ತರಳಬಾಳು ಹುಣ್ಣಿಮೆಗೆ ಪಟ್ಟಣದ ಮುಖ್ಯ ಬೀದಿ ಮತ್ತು ವೃತ್ತಗಳಲ್ಲಿ ವರ್ತಕರು, ಅಭಿಮಾನಿಗಳು, ರಾಜಕೀಯ ಧುರೀಣರು ತಮ್ಮ ತಮ್ಮ ಭಾವಚಿತ್ರವಿರುವ ಬ್ಯಾನರ್ಸ್ಗಳನ್ನು ಹಾಕಿಕೊಂಡು ನವ ವಧುವಿನಂತೆ ಶೃಂಗಾರ ವಾಗುತ್ತಿರುವುದು ಕಂಡುಬರುತ್ತಿದೆ.