ಮೂಡಿಗೆರೆ: ಪಟ್ಟಣದ ಮೊರಾರ್ಜಿದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಕಳೆದ ವರ್ಷ ಮೃತಪಟ್ಟ ವಿದ್ಯಾರ್ಥಿನಿ ಅರ್ಪಿತಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲರಾಗಿರುವ ಅಧಿಕಾರಿಗಳ ಕ್ರಮ ಖಂಡಿಸಿ ತಾಲ್ಲೂಕು ಪ.ಜಾತಿ ಮತ್ತು ಪ.ವರ್ಗಗಳ ತಾಲ್ಲೂಕು ಹಿತರಕ್ಷಣಾ ಸಮಿತಿ ಗುರುವಾರ ತಾ.ಪಂ ಎದುರು ಪ್ರತಿಭಟನೆ ನಡೆಸಿತು.
ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ನೀಡಿದ ಭರವಸೆಯಂತೆ ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ರೂ.2 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದರು.
ಹಿತರಕ್ಷಣಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ತಾ.ಪಂ ದ್ವಾರದ ಬಳಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿ ನೀಡಿ ಸಮಾಜಕಲ್ಯಾಣ ಸಚಿವರೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ತಾ.ಪಂ ಅಧ್ಯಕ್ಷ ರಂಜನ್ ಅಜಿತ್ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಶೇಷಗಿರಿ, ಜಿ.ಪಂ ಸದಸ್ಯ ಎಂ.ಎಸ್.ಅನಂತ್, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಜಯಂತ್, ತಾ.ಪಂ ಸದಸ್ಯ ದೇವರಾಜ್, ತಹಸೀಲ್ದಾರ್ ಚಿನ್ನರಾಜು, ತಾ.ಪಂ ಅಧಿಕಾರಿ ಲಕ್ಷ್ಮಿಕಾಂತ್, ಹಿತರಕ್ಷಣಾ ಸಮಿತಿ ಅಧ್ಯಕ್ಷ ದೇಜಪ್ಪ, ಕಾರ್ಯದರ್ಶಿ ಕಿರುಗುಂದ ರಾಮಯ್ಯ, ರಮೇಶ್, ರುದ್ರಯ್ಯ, ಉದುಸೆ ಮಂಜಯ್ಯ, ಲೋಕವಳ್ಳಿ ರಮೇಶ್, ಮಂಜುನಾಥ್, ಬೆಟ್ಟಗೆರೆ ಶಂಕರ್ ಮತ್ತಿತರರು ಇದ್ದರು.