ಹಿರಿಯೂರು: ನಗರದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಿರುವ ಬಗ್ಗೆ ನಾಗರಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಕಾರಣ, ನಾಯಿಗಳ ಹಾವಳಿ ತಡೆಗೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಚ್. ಮಹಾಂತೇಶ್ ಭರವಸೆ ನೀಡಿದರು.
ನಾಯಿ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ನೀಡುವ ಸಂಬಂಧ ಸಮಿತಿ ರಚಿಸಿ, ನಾಯಿ ಕಡಿತಕ್ಕೆ ಒಳಗಾದವರನ್ನು ಭೇಟಿ ಮಾಡಿದ ನಂತರ ನಗರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಪ್ರಕ್ರಿಯೆಗೆ ಟೆಂಡರ್ ಕರೆಯಲಾಗಿದೆ. ಇದರಿಂದ ನಾಯಿಗಳ ಸಂತಾನ ಕಡಿಮೆ ಆಗಲಿದೆ. ನಾಯಿಗಳ ಸಂತಾನ ಕಡಿಮೆ ಮಾಡುವುದು ಹಾಗೂ ಹುಚ್ಚು ನಾಯಿ ರೋಗ ನಿಯಂತ್ರಿಸುವುದಕ್ಕೆ ನಗರಸಭೆಯ ಆರೋಗ್ಯ ವಿಭಾಗ ಮತ್ತು ಪಶು ಇಲಾಖೆ ಸಹಯೋಗದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ನಾಯಿ ಕಡಿತಕ್ಕೆ ಒಳಗಾದವರಿಗೆ ನಗರಸಭೆ ₹5,000 ಪರಿಹಾರ ನೀಡಲಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.
ನಾಯಿ ಕಡಿತಕ್ಕೆ ಒಳಗಾದ ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ವಿವರಿಸಿದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಮಹಮದ್ ಹುಸೇನ್, ನಗರಸಭೆ ಆರೋಗ್ಯ ನಿರೀಕ್ಷಕರಾದ ವೈ.ಎಸ್.ಸಂಧ್ಯಾ, ಮಹಲಿಂಗರಾಜು ಉಪಸ್ಥಿತರಿದ್ದರು.