ಚಿತ್ರದುರ್ಗ: ಪಡಿತರ ವ್ಯವಸ್ಥೆಗೆ ಮೆಕ್ಕೆಜೋಳ ಒಳಪಡದೇ ಇರುವುದರಿಂದ ಖರೀದಿ ಕೇಂದ್ರ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅಸಹಾಯಕತೆ ವ್ಯಕ್ತಪಡಿಸಿದರು.
ಇಲ್ಲಿನ ಮುರುಘಾ ಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಕೃಷಿ ಮತ್ತು ಕೈಗಾರಿಕಾ ಮೇಳವನ್ನು ಶನಿವಾರ ಉದ್ಘಾಟಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ಚಿತ್ರದುರ್ಗ, ಹಾವೇರಿ ಸೇರಿ ರಾಜ್ಯದ ಹಲವು ಭಾಗದಲ್ಲೂ ಮೆಕ್ಕೆಜೋಳ ಹೆಚ್ಚಾಗಿ ಬೆಳೆಯಲಾಗಿದೆ. ಆದರೆ, ಖರೀದಿ ಕೇಂದ್ರದ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಭತ್ತ ಖರೀದಿ ಕೇಂದ್ರ ಡಿಸೆಂಬರ್ ನಲ್ಲಿ ತೆರೆಯಲಾಗುತ್ತದೆ. ರಾಗಿ, ತೊಗರಿ ಖರೀದಿ ಕೇಂದ್ರ ಇನ್ನೂ ಪರಿಶೀಲನೆಯಲ್ಲಿದೆ’ ಎಂದು ಹೇಳಿದರು.
‘ಅತಿವೃಷ್ಟಿಯಿಂದ ಬೆಳೆ ಹಾನಿಗೆ ಉಂಟಾಗಿರುವ ಕೃಷಿ ಜಮೀನುಗಳಿಗೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಪರಿಹಾರಕ್ಕೆ ಜಿಲ್ಲಾಧಿಕಾರಿ ಖಾತೆಯಲ್ಲಿ ಅಗತ್ಯ ಹಣವಿದೆ. ಅತಿವೃಷ್ಟಿಯನ್ನು ಸರ್ಕಾರ ಸಮರ್ಥವಾಗಿ ಎದುರಿಸುತ್ತಿದೆ’ ಎಂದು ಹೇಳಿದರು.
‘ಕೊರೊನಾ ಸೋಂಕಿಗೆ ನೀಡುವ ಲಸಿಕೆಯನ್ನು ಸಾರ್ವತ್ರಿಕವಾಗಿ ನೀಡಲಾಗುತ್ತದೆ. ಲಸಿಕೆಯನ್ನು ಎಲ್ಲರಿಗೂ ನೀಡಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್’' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.