ಚಿತ್ರದುರ್ಗ: ಕಳೆದ ಹದಿನೈದು ದಿನದ ಹಿಂದೆ ಬೀದಿ ನಾಯಿಯಿಂದ ಕಡಿತಕ್ಕೊಳಗಾಗಿದ್ದ ಮೆದೇಹಳ್ಳಿ ಗ್ರಾಮದ ಬಾಲಕ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ.
ಗ್ರಾಮದ ರಾಮಪ್ಪ, ಲಕ್ಷ್ಮಿ ದಂಪತಿಯ ಪುತ್ರ ತರುಣ್ (10) ಮೃತ ಬಾಲಕ. ಶಾಲೆಗೆ ಹೋಗುವ ಸಮಯದಲ್ಲಿ ನಾಯಿ ದಾಳಿ ನಡೆಸಿ ತೀವ್ರವಾಗಿ ಕಚ್ಚಿ ಗಾಯಗೊಳಿಸಿತ್ತು. ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೆಲ ದಿನದ ಚಿಕಿತ್ಸೆ ಬಳಿಕ ಚೇತರಿಕೆ ಕಾಣದ ಕಾರಣ ವೈದ್ಯರ ಸಲಹೆಯಂತೆ ಪಾಲಕರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ವೇಳೆ ಸೋಂಕು ದೇಹದಲ್ಲಿ ತೀವ್ರವಾಗಿ ಹರಡಿದ್ದ ಕಾರಣ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
‘ಬಾಲಕನಿಗೆ ಕಚ್ಚಿದ ನಾಯಿ ಗ್ರಾಮದಲ್ಲಿ ನಾಲ್ವರ ಮೇಲೆ ದಾಳಿ ನಡೆಸಿತ್ತು. ಆದರೆ ಅವರು ಚಿಕಿತ್ಸೆ ಪಡೆದು ಗುಣಮುಖರಾದರು. ಆದರೆ ನನ್ನ ಮಗ ಮಾತ್ರ ಬದುಕಿ ಬರಲಿಲ್ಲ’ ಎಂದು ತರುಣ್ ದೊಡ್ಡಮ್ಮ ರೇಣುಕಾ ಕಣ್ಣೀರಾದರು.