ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಜುಲೈ 30ರ ಒಳಗೆ ಭದ್ರಾ ಜಲಾಶಯದಿಂದ ನೀರು ಹರಿಸದಿದ್ದರೆ ಅಂದು ನಗರದಲ್ಲಿರುವ ವಿಶ್ವೇಶ್ವರಯ್ಯ ನೀರಾವರಿ ನಿಗಮದ ಕಚೇರಿಗೆ ಬೀಗ ಜಡಿದು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದರು.
ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ನೀರು ಬಿಡುಗಡೆಗೆ ಆಗ್ರಹಿಸಿ ಸೋಮವಾರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯನ್ನು ಕೆಲಹೊತ್ತು ತಡೆದು ಪ್ರತಿಭಟನೆ ನಡೆಸಿದ ನಂತರ ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
‘ಸಾರ್ವಜನಿಕರ ಸೇವಕರಾಗಿರುವ ಅಧಿಕಾರಿಗಳು ಸಬೂಬು ಹೇಳದೆ ನೀರು ಬಿಡುವ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಪಾಲಿಸಬೇಕು. ಯಾರ ಒತ್ತಡಕ್ಕೂ ಮಣಿಯದೆ ನಾಲ್ಕು ತಿಂಗಳು ನಿರಂತರವಾಗಿ ನೀರು ಹರಿಸಬೇಕು. ಇಲ್ಲದಿದ್ದರೆ ರೈತರ ತಾಳ್ಮೆಯ ಕಟ್ಟೆ ಒಡೆಯುತ್ತದೆ’ ಎಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ಶಿವಣ್ಣ, ತಿಮ್ಮಾರೆಡ್ಡಿ, ಸೈಯದ್ ಮುನ್ನಾ, ಹನುಮಂತರಾಯ, ಹನುಮಂತಪ್ಪ, ಟಿ. ಚಂದ್ರಪ್ಪ, ಎನ್. ನಾಗೇಂದ್ರಪ್ಪ, ಷಣ್ಮುಖಪ್ಪ, ಕರಿಯಣ್ಣ, ಯಲ್ಲಪ್ಪ, ಎಚ್. ರಂಗಸ್ವಾಮಿ, ಎಚ್. ರಾಮಯ್ಯ, ತಿಮ್ಮಣ್ಣ, ಆದಿರಾಳು ನಾಗರಾಜ್ ಇದ್ದರು.