ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ವರ್ಷದ ತೊಡಕಿಗೆ ಕಹಿ ತಂದ ಕೊರೊನಾ

ವಾಣಿಜ್ಯ, ವಹಿವಾಟು ಬಂದ್, ಹೊರ ಬಂದವರಿಗೆ ಲಾಠಿ ರುಚಿ
Last Updated 26 ಮಾರ್ಚ್ 2020, 16:11 IST
ಅಕ್ಷರ ಗಾತ್ರ

ಹೊಳಲ್ಕೆರೆ:ಕೊರೊನಾ ಹರಡುವ ಭೀತಿಯಲ್ಲಿ ಭಾರತ್ ಬಂದ್ ಘೋಷಿಸಿರುವ ಹಿನ್ನೆಲೆಯಲ್ಲಿ ಈ ವರ್ಷ ಯುಗಾದಿಯ ನಂತರದ ವರ್ಷತೊಡಕಿಗೆ ಅಡ್ಡಿಯಾಯಿತು.

ತಾಲ್ಲೂಕಿನಾದ್ಯಂತ ಮಾಂಸ ಮಾರಾಟ ನಿಷೇಧಿಸಿದ್ದರಿಂದ ಜನ ಪರದಾಡಿದರು. ಮಾಂಸ ಖರೀದಿಗೆ ಬಂದಿದ್ದ ಕೆಲವರು ಅಂಗಡಿ ಬಾಗಿಲು ಮುಚ್ಚಿದ್ದು ನೋಡಿ ವಾಪಸಾದರು. ಟಿಪ್ಪುನಗರದಲ್ಲಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿ ಗ್ರಾಹಕರನ್ನು ಚದುರಿಸಿದರು. ಪಿಎಸ್ಐ ಸ್ವಾತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಕೆಲವರಿಗೆ ಲಾಠಿ ರುಚಿ ತೋರಿಸಿದರು. ನಂತರ ಟಿಪ್ಪು ನಗರ ಪ್ರವೇಶಿಸದಂತೆ ಮರದ ದಿಮ್ಮಿಗಳನ್ನು ಅಡ್ಡ ಇಟ್ಟು ರಸ್ತೆ ಬಂದ್ ಮಾಡಿಸಿದರು.

ಬುಧವಾರ ಚಂದ್ರ ದರ್ಶನ ಆಗದ ಹಿನ್ನೆಲೆಯಲ್ಲಿ ಗುರುವಾರ ವರ್ಷದ ತೊಡಕು ಮಾಡುವವರ ಸಂಖ್ಯೆಯೂ ಕಡಿಮೆ ಇತ್ತು. ಗುರುವಾರ ಸಂಜೆ ಚಂದ್ರದರ್ಶನ ಪಡೆದು, ಶುಕ್ರವಾರ ಮಾಂಸದೂಟ ಮಾಡಿದರಾಯ್ತು ಎಂದು ಕೆಲವರು ಸುಮ್ಮನಿದ್ದರು.

ಹೊರಬಂದವರಿಗೆ ಲಾಠಿ ಏಟು:

ಪೊಲೀಸರು ಪಟ್ಟಣದಲ್ಲಿ ಯಾವುದೇ ವಹಿವಾಟು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದರು. ಮೆಡಿಕಲ್ ಸ್ಟೋರ್, ತರಕಾರಿ ಅಂಗಡಿ ತೆರೆದಿದ್ದು ಬಿಟ್ಟರೆ ಬೇರೆ ಯಾವ ಅಂಗಡಿಗಳನ್ನೂ ತೆರೆಯಲು ಬಿಡಲಿಲ್ಲ. ಮನೆಯಿಂದ ಹೊರಬಂದವರಿಗೆ ಲಾಠಿ ರುಚಿ ತೋರಿಸುತ್ತಿದ್ದರು. ಇದರಿಂದ ಇಡೀ ಪಟ್ಟಣ ಬಿಕೋ ಎನ್ನುತ್ತಿತ್ತು. ಹಳ್ಳಿಗಳಲ್ಲಿ ಮಾತ್ರ ಹಬ್ಬದ ಸಂಭ್ರಮ ಕಂಡುಬಂತು.

ಗ್ರಾಮ ಪ್ರವೇಶಿಸದಂತೆ ಬೇಲಿ:

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಹೊರಗಿನವರು ಪ್ರವೇಶಿಸದಂತೆ ರಸ್ತೆಗೆ ಅಡ್ಡಲಾಗಿ ಬೇಲಿ, ಮಣ್ಣು ಹಾಕಲಾಗಿತ್ತು. ರಾಷ್ಟ್ರೀಯ ಹೆದ್ದಾರಿ-13ರಿಂದ ಬಿ.ಜಿ.ಹಳ್ಳಿ ಪ್ರವೇಶಿಸದಂತೆ ರಸ್ತೆಗೆ ಅಡ್ಡಲಾಗಿ ಮಣ್ಣಿನ ರಾಶಿ ಹಾಕಲಾಗಿತ್ತು. ದುಮ್ಮಿ ಗೊಲ್ಲರಹಟ್ಟಿಯಲ್ಲೂ ಗ್ರಾಮ ಪ್ರವೇಶಿಸುವ ರಸ್ತೆಗೆ ಮುಳ್ಳಿನ ಪೊದೆಗಳನ್ನು ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT