ಕೋವಿಡ್ ನಿಯಮ ಮಾಯ, ಗುಂಪುಗಟ್ಟಿದ ರೈತರು

ಮೊಳಕಾಲ್ಮುರು: ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಬಿತ್ತನೆ ಮಾಡಲು ಸರ್ಕಾರದಿಂದ ಮಂಜೂರಾಗಿರುವ ಶೇಂಗಾ ಬೀಜದ ಕಿಟ್ ವಿತರಣೆಗೆ ಸೂಕ್ತ ಮಾನದಂಡ ಇಲ್ಲದ ಪರಿಣಾಮವಾಗಿ ಅರ್ಹ ರೈತರಿಗೆ ದಕ್ಕುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರತಿವರ್ಷವೂ ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಕಿಟ್ಗಳು ಕೃಷಿ ಇಲಾಖೆಯ ಮೂಲಕ ಉಚಿತವಾಗಿ ರೈತರಿಗೆ ನೀಡಲಾಗುತ್ತಿದೆ. ಈ ವರ್ಷ ತಾಲ್ಲೂಕಿನಲ್ಲಿ ಬಿತ್ತನೆ ಮಾಡಲಾಗುತ್ತಿರುವ ಟಿವಿಎಂ-ವಿ ಶೇಂಗಾ ತಳಿಗೆ ಪರ್ಯಾಯವಾಗಿ ನೂತನವಾಗಿ ಆವಿಷ್ಕರಿಸಿರುವ ಧರಣಿ ತಳಿ ಶೇಂಗಾಕಾಯಿ
ಯನ್ನು ಕಿಟ್ನಲ್ಲಿ ನೀಡಲಾಗಿದೆ. ಪ್ರತಿ ಕಿಟ್ 20 ಕೆ.ಜಿ ತೂಕವಿದೆ.
ಈ ವರ್ಷ ತಾಲ್ಲೂಕಿಗೆ 3,000 ತೊಗರಿ ಮತ್ತು 1,300 ಶೇಂಗಾ ಕಿಟ್ ಬಂದಿದೆ. ತೊಗರಿ ಕಿಟ್ ನೀಡಲಾಗಿದೆ. ವಿತರಣೆಗೆ ನಿಗದಿತ ಮಾನದಂಡವಿಲ್ಲ. ಶೇಂಗಾ ಕಿಟ್ ಬಗ್ಗೆ ರೈತರಿಂದ ರೈತರಿಗೆ ಹೆಚ್ಚು ಪ್ರಚಾರವಾಗಿ ಗುರುವಾರ ರಾಂಪುರ ರೈತ ಸಂಪರ್ಕ ಕೇಂದ್ರದ ಬಳಿ ಸೇರಿದ್ದರು. ವಿತರಣೆ ಸ್ಥಗಿತಗೊಳಿಸಲಾಗಿದೆ. 1,300 ಕಿಟ್ಗಳ ಪೈಕಿ ಮೊಳಕಾಲ್ಮುರು ಕಸಬಾ ಹೋಬಳಿಗೆ 750 ಹಾಗೂ ದೇವಸಮುದ್ರ ಹೋಬಳಿಗೆ 550 ಕಿಟ್ ನೀಡಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ
ವಿ.ಸಿ. ಉಮೇಶ್
ತಿಳಿಸಿದರು.
ನೂತನವಾಗಿ ಸಂಶೋಧಿಸಿದ ತಳಿಗಳನ್ನು ನೀಡಲಾಗುತ್ತಿದೆ. ಈ ಭಾಗದಲ್ಲಿ 22,000 ಶೇಂಗಾ ಬೆಳೆಗಾರರು ಇದ್ದು, ಆಸಕ್ತ ರೈತರಿಗೆ ನೀಡಬೇಕು ಎಂಬ ನಿಯಮವಿದೆ. ಹೆಚ್ಚು ಪ್ರಚಾರವಾಗಿದ್ದು ಸಮಸ್ಯೆಗೆ ಕಾರಣವಾಗಿದೆ ಎಂದು ಕೃಷಿ ವಿಜ್ಞಾನಿಗಳು
ಹೇಳಿದರು.
ರೈತ ಸಂಪರ್ಕ ಕೇಂದ್ರದ ಬಳಿ ಜಮಾಯಿಸಿದ್ದ ರೈತರು ಮಾತನಾಡಿ, ‘ನೀಡುವುದಾದರೆ ಎಲ್ಲ ರೈತರಿಗೆ ನೀಡಲಿ. ಇಲ್ಲವಾದರೆ ಸ್ಥಗಿತಗೊಳಿಸಲಿ. ಅದನ್ನು ಬಿಟ್ಟು ಜನಪ್ರತಿನಿಧಿಗಳಿಂದ ಒತ್ತಡ ತರುವ ರೈತರಿಗೆ ಕಿಟ್ ನೀಡಲಾಗುತ್ತಿದೆ. ಅರ್ಹ ರೈತರಿಗೆ ಇಲ್ಲಿ ಅನ್ಯಾಯವಾಗಿದೆ. ಯಾವುದೇ ಮಾನದಂಡವಿಲ್ಲ ಎಂದ ಮೇಲೆ ಎಲ್ಲರಿಗೂ ನೀಡಬೇಕು’ ಎಂದು ದೂರಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಬಳಿಯೂ ಗುರುವಾರ ಹಲವು ರೈತರು ಕಿಟ್ ನೀಡಿಲ್ಲ ಎಂದು ಸಂಜೆಯ ತನಕ ಪ್ರತಿಭಟನೆ ನಡೆಸಿದರು. ಕಿಟ್ ನೀಡುವುದಾಗಿ ಅರ್ಜಿಯನ್ನು ಪಡೆದು ಸತಾಯಿಸಲಾಗುತ್ತಿದೆ ಎಂದು ಪ್ರಾಂತ್ಯ ರೈತ ಸಂಘದ ತಾಲ್ಲೂಕು ಸಂಚಾಲಕ ದಾನಸೂರ ನಾಯಕ ದೂರಿದರು.
ಹಿರಿಯ ಅಧಿಕಾರಿಗಳು ಗಮನ
ಹರಿಸಿ ಮಾನದಂಡ ರೂಪಿಸುವ ಮೂಲಕ ಅರ್ಹರಿಗೆ ಕಿಟ್ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ
ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.