ಹಿರಿಯೂರು: ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಬಗ್ಗೆ ಹಲವು ತಯಾರಿ ನಡೆಸಿದ್ದು, ತಜ್ಞರ ಶಿಫಾರಸಿನಂತೆ ಆರೋಗ್ಯ ಸೇವಾ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ತೀರ್ಮಾನಿಸಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಹೇಳಿದರು.
ಶನಿವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
‘ತಾಲ್ಲೂಕು ಮಟ್ಟದಲ್ಲಿ ಲಸಿಕೆ ವಿತರಣೆಗೆ ಎಲ್ಲ ಇಲಾಖೆಗಳ ಸಹಕಾರ ಅತ್ಯಗತ್ಯ. ಲಸಿಕೆ ಸಂಗ್ರಹಿಸಲು ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ಮೊದಲ ಹಂತದಲ್ಲಿ ವೈದ್ಯರು ಸೇರಿ ಆರೋಗ್ಯ ಸೇವಾ ಕಾರ್ಯದಲ್ಲಿ ತೊಡಗಿರುವ 1,500 ಜನರ ಮಾಹಿತಿಯನ್ನು ನೀಡಿದ್ದೇವೆ’ ಎಂದು ವಿವರಿಸಿದರು.
‘ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಇಲ್ಲಿಯವರೆಗೆ 31150 ಸ್ವ್ಯಾಬ್ ಸಂಗ್ರಹ ಮಾಡಿದ್ದು, 2170 ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಧರ್ಮಪುರ, ಮರಡಿಹಳ್ಳಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ 42 ಸಕ್ರಿಯ ಪ್ರಕರಣಗಳಿವೆ. ದೇವರಕೊಟ್ಟ ಕೋವಿಡ್ ಕೇಂದ್ರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಜಿ.ಎಚ್. ಸತ್ಯನಾರಾಯಣ, ‘ಇದು ಗಂಭೀರ ವಿಚಾರವಾಗಿದ್ದು, ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಆರೋಗ್ಯ ಇಲಾಖೆಗೆ ಸಂಪೂರ್ಣ ಸಹಕಾರ ನೀಡೋಣ’ ಎಂದರು.
ಸಭೆಯಲ್ಲಿ ಸಿಡಿಪಿಒ ತಿಪ್ಪಯ್ಯ, ಸಿಪಿಐ ರಾಘವೇಂದ್ರ, ನಗರ ಠಾಣೆ ಎಸ್ಐ ಅನುಸೂಯಮ್ಮ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಹನುಮಪ್ಪ, ಶಿಕ್ಷಣ ಇಲಾಖೆಯ ಇಸಿಒ ಶಶಿಧರ್, ಸಣ್ಣರಂಗಪ್ಪ, ಆಂಜನೇಯ ಇದ್ದರು.