ಹೊಸದುರ್ಗ: ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಮಹೇಂದ್ರ ಕುಮಾರ್ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚಿನ್ನಾಭರಣ ತಯಾರಕರು, ಮಾರಾಟಗಾರರು, ಹೋಟೆಲ್ ಮಾಲೀಕರು, ವಸತಿಗೃಹ, ಕಲ್ಯಾಣ ಮಂಟಪ, ಬೋರ್ವೆಲ್, ಪೆಟ್ರೋಲ್ ಬಂಕ್ ಮಾಲೀಕರು, ಗಿರವಿ ದಲ್ಲಾಳಿಗಳು ಹಾಗೂ ಎಲ್ಲಾ ಬ್ಯಾಂಕುಗಳು ವ್ಯವಸ್ಥಾಪಕರ ಸಭೆಯಲ್ಲಿ ಅವರು ಮಾತನಾಡಿದರು.
‘ಯಾರಿಗೂ ನಿಯಮ ಮೀರಿ ಹಣ ನೀಡುವಂತಿಲ್ಲ. ಅಂಗಡಿ ಮಾಲೀಕರು, ಉದ್ಯೋಗಸ್ಥರು ವಹಿವಾಟು ನಡೆಸುವ ಹಣಕ್ಕೆ ಸೂಕ್ತ ದಾಖಲೆಗಳನ್ನ ಇಟ್ಟುಕೊಂಡಿರಬೇಕು. ಒಂದು ವೇಳೆ ನಿಯಮ ಮೀರಿದರೆ, ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಬಂಗಾರದ ಅಂಗಡಿ ಮತ್ತು ಗಿರವಿ ಲೇವಾದೇವಿ ಅಂಗಡಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಮಾದರಿಯ ಆಭರಣಗಳನ್ನು ಖರೀದಿ ಮಾಡುವವರು ಮಾಹಿತಿಯನ್ನು ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೆ ತಿಳಿಸಬೇಕು. ವಸತಿ ಗೃಹಗಳ ಮಾಲೀಕರು ವಸತಿ ಇರುವವರ ದಾಖಲೆಗಳನ್ನು ಪಡೆದುಕೊಳ್ಳಬೇಕು. ಕಲ್ಯಾಣ ಮಂಟಪದಲ್ಲಿ ಯಾವುದೇ ರಾಜಕೀಯ ಸಭೆಗಳಿಗೆ ಅನುಮತಿ ಇಲ್ಲದೆ ಅವಕಾಶ ನೀಡುವಂತಿಲ್ಲ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಸುನಿಲ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ಶಶಿಧರ್ ಮತ್ತು ಬ್ಯಾಂಕ್ ಸಿಬ್ಬಂದಿ ಇದ್ದರು.