ನಾಯಕನಹಟ್ಟಿ: ಹದಿನೈದು ದಿನಗಳಿಂದ ತಳಕು ಬೆಸ್ಕಾಂ ಉಪವಿಭಾಗೀಯ ವ್ಯಾಪ್ತಿಯ ಜಮೀನುಗಳಲ್ಲಿರುವ ರೈತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದು ಅಮಾನವೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಬೆಸ್ಕಾಂ ಉಪವಿಭಾಗೀಯ ಕಚೇರಿ ಬಳಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ಹದಿನೈದು ದಿನಗಳಿಂದ ಸತತವಾಗಿ ಹಳ್ಳಿಗಳಿಗೆ ಮತ್ತು ಜಮೀನುಗಳಲ್ಲಿ ವಾಸಿಸುವ ರೈತರ ಮನೆಗಳಿಗೆ, ಪಂಪ್ಸೆಟ್ ಮನೆಗಳಿಗೆ ವಿದ್ಯುತ್ ಕಡಿತ ಮಾಡಿರುವ ಪರಿಣಾಮ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಿದೆ. ರಾತ್ರಿವೇಳೆ ಹಳ್ಳಿಗಳಲ್ಲಿ, ಹೊಲಗಳಲ್ಲಿ, ಒಂಟಿ ಮನೆಗಳಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುವ ಸಂಭವ ಇದೆ. ವಿಷಜಂತುಗಳ ಹಾವಳಿ ಹೆಚ್ಚಾಗಿ ರೈತರ ಜೀವಹಾನಿಯಾಗುವ ಅಪಾಯ ತೆಲೆದೋರಿದೆ. ಸಂಜೆ 6ರಿಂದ ರಾತ್ರಿ 10ಗಂಟೆಯವರೆಗೂ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಅಡುಗೆ ಮಾಡುವ ಹೆಣ್ಣುಮಕ್ಕಳಿಗೂ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಹಳ್ಳಿಗಳಲ್ಲಿ ದೀಪ ಹಚ್ಚಲು ಸೀಮೆಎಣ್ಣೆ ಸಹ ದೊರೆಯುತ್ತಿಲ್ಲ. ವಿದ್ಯುತ್ ಸಮಸ್ಯೆ ಬಗೆಹರಿಯುವವರೆಗೂ ಅನಿರ್ದಿಷ್ಟಾವದಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಬೆಸ್ಕಾಂ ಅಧಿಕಾರಿಗಳು ತುರ್ತಾಗಿ ಸಮಸ್ಯೆ ಬಗೆಹರಿಸದಿದ್ದರೆ ರೈತರ ಹೋರಾಟದ ಬಿಸಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಹಂಪಣ್ಣ, ಜೆ.ಎಸ್.ಯರ್ರಿಸ್ವಾಮಿ, ಜಿ.ಎಚ್.ತಿಪ್ಪೇಸ್ವಾಮಿ, ಜಿ.ಟಿ.ಮಂಜುನಾಥ, ಪೂಜಾರಿ ತಿಪ್ಪೇಸ್ವಾಮಿ, ಸಿ.ಬಿ.ತಿಪ್ಪೇಸ್ವಾಮಿ, ಬೆಸ್ಕಾಂ ಕಾರ್ಯಕಾರಿ ಎಂಜಿನಿಯರ್ ರಾಮಚಂದ್ರಸುತಾರ್, ಬೆಸ್ಕಾಂ ಎಇಇ ತಿಮ್ಮರಾಜು, ಎಂಜಿನಿಯರ್ ವೆಂಕಟೇಶ್, ಶಾಖಾಧಿಕಾರಿಗಳಾದ ಎನ್.ಬಿ.ಬೋರಯ್ಯ, ಸೂರಲಿಂಗಪ್ಪ, ನಾಗರಾಜ್, ದಂಡಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.