ಚಿತ್ರದುರ್ಗ: ಚಿಪ್ಪುಹಂದಿ ಬೇಟೆಯಾಡಿ ಚಿಪ್ಪುಗಳನ್ನು ಹೊರರಾಜ್ಯಕ್ಕೆ ಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದಾರೆ.
ತಾಲ್ಲೂಕಿನ ದೊಡ್ಡಪುರ ಗ್ರಾಮದ ರಾಮಪ್ಪ (64) ಹಾಗೂ ಯೋಗೇಶ್ (35) ಬಂಧಿತರು. ಆರೋಪಿಗಳಿಂದ ಚಿಪ್ಪುಹಂದಿಯ ಒಂದೂವರೆ ಕೆ.ಜಿ ಚಿಪ್ಪು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗದ ಮಾಹಿತಿಯ ಮೇರೆಗೆ ವಲಯ ಅರಣ್ಯಾಧಿಕಾರಿ ಜಿ.ಎಸ್. ಸಂದೀಪ ನಾಯಕ ನೇತೃತ್ವದ ತಂಡ ಬುರುಜನರೊಪ್ಪದ ಸಮೀಪ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅಳವಿನಂಚಿನಲ್ಲಿರುವ ಚಿಪ್ಪುಹಂದಿಯನ್ನು ಬೇಟೆಯಾಡಿ ಹೊರರಾಜ್ಯಕ್ಕೆ ಸಾಗಣೆ ಮಾಡುತ್ತಿದ್ದದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.