ಭರಮಸಾಗರ (ಚಿತ್ರದುರ್ಗ): ಬಹಿರ್ದೆಸೆಗೆ ತೆರಳಿದ್ದ 13 ವರ್ಷದ ಬಾಲಕಿಯ ಮೇಲೆ ಹಾಡಹಗಲೇ ಅತ್ಯಾಚಾರ ಎಸಗಿ ಕೊಲೆ ಮಾಡಿದ ದಾರುಣ ಘಟನೆ ಠಾಣೆ ಭರಮಸಾಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶುಕ್ರವಾರ ಮಧ್ಯಹ್ನ 12.30ಕ್ಕೆ ತಂಬಿಗೆ ಹಿಡಿದು ಗ್ರಾಮದಿಂದ 150 ಮೀಟರ್ ದೂರದ ರಸ್ತೆಯಲ್ಲಿ ಬಾಲಕಿ ಬಹಿರ್ದೆಸೆಗೆ ಹೋಗಿದ್ದಳು. ತುಂಬಾ ಹೊತ್ತು ಕಳೆದರೂ ಬಾಲಕಿ ಮರಳದೇ ಇರುವುದರಿಂದ ಆತಂಕಗೊಂಡ ಪೋಷಕರು ಪರಿಶೀಲನೆ ನಡೆಸಿದಾಗ ಮೆಕ್ಕೆಜೋಳದ ಜಮೀನಿನಲ್ಲಿ ವಿವಸ್ತ್ರವಾದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮನೆ ನಿರ್ಮಾಣ ಹಂತದಲ್ಲಿರುವುದರಿಂದ ಕುಟುಂಬ ಸಮೇತ ಸಮುದಾಯ ಭವದನಲ್ಲಿ ತಂಗಿದ್ದೇವೆ. ಶೌಚಾಲಯಕ್ಕೆ ಬಯಲನ್ನೇ ಆಶ್ರಯಿಸಿದ್ದೇವೆ. ಮೂವರು ಮಕ್ಕಳನ್ನು ಇಲ್ಲೇ ಬಿಟ್ಟು ಪತ್ನಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದೆ. ಮಧ್ಯಾಹ್ನ 1 ಗಂಟೆಗೆ ಮರಳಿದಾಗ ಪುತ್ರಿ ಇರದಿರುವುದನ್ನು ಗಮನಿಸಿ ಹುಡುಕಾಟ ನಡೆಸಿದೆವು’ ಎಂದು ಬಾಲಕಿಯ ತಂದೆ ದುಃಖ ತೋಡಿಕೊಂಡರು.
ಮೆಕ್ಕೆಜೋಳದ ಜಮೀನಿನಲ್ಲಿ ಪತ್ತೆಯಾದ ಬಾಲಕಿಯ ಮೃತದೇಹದ ಮೇಲೆ ಪರಚಿದ ಗುರುತುಗಳಿವೆ. ಚಪ್ಪಲಿ, ನೀರು ತುಂಬಿದ್ದ ತಂಬಿಗೆ ಸಮೀಪದಲ್ಲೇ ಬಿದ್ದಿವೆ. ಬಾಲಕಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.
‘ರಸ್ತೆ ಬದಿಯಲ್ಲಿ ಬಹಿರ್ದೆಸೆಗೆ ಬಾಲಕಿ ತೆರಳಿದ್ದಳು. ಅವಳನ್ನು ಎಳೆದೊಯ್ದು ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.