ಚಿತ್ರದುರ್ಗ: ‘ರಾಜ್ಯದಲ್ಲಿ ಈ ಹಿಂದೆ ಕನ್ನಡಕ್ಕಾಗಿ ನಡೆದ ಗೋಕಾಕ್ ಚಳವಳಿ ನಮ್ಮ ನಿಜವಾದ ಚಳವಳಿ’ ಎಂದು ಬೆಂಗಳೂರಿನ ಕನ್ನಡ ಕಾರ್ಯಕರ್ತ ರಾ.ನಂ.ಚಂದ್ರಶೇಖರ್ ಹೇಳಿದರು.
ನಗರದ ಐಎಂಎ ಸಭಾಂಗಣದಲ್ಲಿ ಭಾನುವಾರ ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ ಸಂಸ್ಕೃತಿ ಸಂಶೋಧನೆ ಗಳ ವಿಚಾರ ಹಾಗೂ ರೇಣುಕಾ ಪ್ರಕಾಶನದಿಂದ ಆಯೋಜಿಸಿದ್ದ 38ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕನ್ನಡ ಚಳವಳಿ ಮುಂದೇನು? ಎಂಬ ವಿಷಯ ಕುರಿತು ಮಾತನಾಡಿದರು.
ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ಕುಮಾರ್ ಪಾಲ್ಗೊಂಡ ನಂತರ ಚಳವಳಿಯ ದಿಕ್ಕು ಬದಲಾಯಿತು. ರಾಜ್ಯದಾದ್ಯಂತ ಸಂಚಾರ ನಡೆಸಿ ದಾಗ ಎಲ್ಲೆಡೆ ಸಾಗರೋಪಾದಿಯಲ್ಲಿ ಜನ ಸೇರಿದ್ದು, ಇತಿಹಾಸವಾಯಿತು. ಆಗ ಕನ್ನಡದ ಕುರಿತು ನಾಡಿನ ಜನ ಜಾಗೃತಗೊಂಡರು. ಇದೊಂದು ವಿಶೇಷ ಚಳವಳಿಯಾಗಿದೆ ಎಂದರು.
‘ಪ್ರಸ್ತುತ ದಿನ ಗಳಲ್ಲಿ ಕನ್ನಡ ಶಾಲೆಗಳಿಗೆ ಕನ್ನಡ ಮಕ್ಕಳೇ ಸೇರುತ್ತಿಲ್ಲ. ಹೆಚ್ಚಿನ ಮಂದಿ ಇಂಗ್ಲಿಷ್ ಮಾಧ್ಯಮದತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರ ತೆರೆಯುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇದಕ್ಕೆ ಹೊರತಾಗಿಲ್ಲ. ಮುಂದಿನ ಕನ್ನಡ ಚಳವಳಿ ಯಾರ, ಯಾವುದರ ವಿರುದ್ಧ ಎಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲು’ ಎಂದು ಹೇಳಿದರು.
ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಾಂತೇಶ್, ‘ಕನ್ನಡ ಈಗ ಕನ್ನಡಿಗರನ್ನೆ ಎದುರಿಸುವ ಸಂಕಷ್ಟದಲ್ಲಿದೆ. ಈ ಮೊದಲು ಬೇರೆ ಭಾಷೆಗಳನ್ನು ಎದುರಿಸುತ್ತಿದ್ದ ಕನ್ನಡದ ಸ್ಥಿತಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ದುಸ್ಥಿತಿಯತ್ತ ಸಾಗುತ್ತಿದೆ’ ಎಂದು ವಿಷಾದಿಸಿದರು.
‘ಕನ್ನಡ ಭಾಷೆಯ ಮೇಲಿನ ಸಮಸ್ಯೆಗಳು ಸಂಕೀರ್ಣವಾಗುತ್ತಿವೆ. ಕನ್ನಡದ ಬಗೆಗಿನ ಕಾಳಜಿ ತೋರಿಕೆಗೆ ಸಿಮೀತವಾಗಬಾರದು. ನಾಡು–ನುಡಿ, ನೆಲ,ಜಲ ಸೇರಿದಂತೆ ಯಾವುದೇ ಸಮಸ್ಯೆ ಬಂದರೂ ಎದೆಗುಂದದೆ ಕನ್ನಡಕ್ಕಾಗಿ ಹೋರಾಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ’ ಎಂದರು.
ಇತಿಹಾಸ ಕೂಟದ ಪ್ರೊ.ಲಕ್ಷ್ಮಣ್ ತೆಲಗಾವಿ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ, ವಕೀಲ ಎಚ್.ಎಂ.ಎಸ್.ನಾಯಕ, ಅಹೋಬಲನಾಯಕ, ಗುರುನಾಥ್, ಮಲ್ಲಿಕಾರ್ಜುನ್ ಅವರೂ ಇದ್ದರು.