ಚಿತ್ರದುರ್ಗ: ಮತದಾನಕ್ಕೂ ಮೊದಲೇ ಚುನಾವಣೆಯಲ್ಲಿ ಗೆದ್ದಿರುವುದಾಗಿ ಹೇಳುತ್ತಿರುವ ಬಿಜೆಪಿ, ಪ್ರಚಾರ ಕಾರ್ಯ ಬಿಟ್ಟು ಮನೆಗೆ ಹೋಗಲಿ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿರುಗೇಟು ನೀಡಿದರು.
ಇಲ್ಲಿನ ಯಾದವ ಮಹಾಸಂಸ್ಥಾನಕ್ಕೆ ಶನಿವಾರ ಭೇಟಿ ನೀಡಿದ್ದ ಅವರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಎದ್ದಿದ್ದು, ಗೆಲುವು ನಿಶ್ಚಿತ’ ಎಂಬ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘ಬಿಜೆಪಿ ಹೆಣಗಳ ಮೇಲೆ, ಕೋವಿಡ್ ಲಸಿಕೆಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮುಗ್ಧ ಜನರ ಮನವೊಲಿಕೆಗೆ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆಯೇ ವಿನಾ ಗೂಂಡಾಗಿರಿಯಲ್ಲ. ಗೂಂಡಾಗಿರಿಯ ವಿವರಣೆಯನ್ನು ಬಿಜೆಪಿಯೇ ನೀಡಲಿ’ ಎಂದು ಹೇಳಿದರು.
ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ‘ಶಿರಾದಲ್ಲಿ ಎದ್ದಿರುವುದು ಸುನಾಮಿ ಅಲೆ ಎಂದವರು ಹುಚ್ಚಾಸ್ಪತ್ರೆಯಿಂದ ಬಂದಿರಬೇಕು. ಸರ್ಕಾರದ ಯೋಜನೆಗಳನ್ನು ಜನರ ಮುಂದಿಟ್ಟು ಬಿಜೆಪಿ ಮತ ಕೇಳಲಿ. ಬಿಜೆಪಿ ನಾಯಕರು ಕೋವಿಡ್ ನೆಪದಲ್ಲಿ ದುಡ್ಡು ಮಾಡಿಕೊಂಡು ತಿರುಗಾಟ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.