ಚಿತ್ರದುರ್ಗ: ‘ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲೂ ಬಂದೋಬಸ್ತ್ ಸೇರಿ ಕರ್ತವ್ಯಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೆವೆಯೋ, ಅಷ್ಟೇ ವಿಮೆ ಮಾಡಿಸುವಲ್ಲಿಯೂ ಪೊಲೀಸರು ಕಾಳಜಿವಹಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಸಲಹೆ ನೀಡಿದರು.
ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಸ್ಬಿಐ ಹಾಗೂ ಅಂಚೆ ಇಲಾಖೆಯಿಂದ ಸಿಗುವ ಸರ್ಕಾರದ ಪ್ರಮುಖ ‘ವಿಮಾ’ ಸೌಲಭ್ಯಗಳ ಕುರಿತು ಸೋಮವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕೋವಿಡ್ನಿಂದ ಎಲ್ಲರಿಗೂ ತೊಂದರೆ ಉಂಟಾಗಿದೆ. ಉಸಿರಾಟದ ಸಮಸ್ಯೆಯಿಂದಾಗಿ ಕೆಲ ಪೊಲೀಸರೇ ಮೃತಪಟ್ಟಿದ್ದಾರೆ. ಆದ್ದರಿಂದ ರೋಗಲಕ್ಷಣ ಇದ್ದಲ್ಲಿ ತಕ್ಷಣ ಪರೀಕ್ಷೆಗೆ ಒಳಪಡಬೇಕು. ಅಲ್ಲದೆ, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ನಿಮ್ಮ ಕಾಳಜಿ ನಿಮ್ಮ ಕೈಯಲ್ಲಿಯೇ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಹಿಸಿ’ ಎಂದು ಸಲಹೆ ನೀಡಿದರು.
‘ಹಣ ಬಳಕೆ ಕುರಿತು ಎಚ್ಚರ ವಹಿಸದಿದ್ದರೆ ₹ 10 ಸಾವಿರವಾಗಲಿ, ₹ 10 ಲಕ್ಷವಾಗಲಿ ದುಡಿದರೂ ಪ್ರಯೋಜನವಿಲ್ಲ. ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಕುಟುಂಬದವರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ’ ಎಂದು ಹೇಳಿದರು.
ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪ, ಮಾರುಕಟ್ಟೆ ಅಧಿಕಾರಿ ವಿಜಯ್ಕುಮಾರ್, ಪಿಎಲ್ಐನ ಅಭಿವೃದ್ಧಿ ಅಧಿಕಾರಿ ಜಾಕೀರ್ ಹುಸೇನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಡಿವೈಎಸ್ಪಿ ಪಾಂಡುರಂಗಪ್ಪ ಇದ್ದರು.