ಚಳ್ಳಕೆರೆ: ಜೈಲುಗಳು ಶಿಕ್ಷೆ ನೀಡುವ ಬದಲಿಗೆ ಖೈದಿಗಳ ಮನಃಪರಿವರ್ತನೆ ಮಾಡುವ ಕೇಂದ್ರಗಳಾಗಿವೆ ಎಂದು ಚಿತ್ರದುರ್ಗ ಕಾರಾಗೃಹದ ಅಧೀಕ್ಷಕಿ ಎಂ.ಮಹಾದೇವಿ ತಿಳಿಸಿದರು.
ಹೆಚ್ಚಿನ ಅಧ್ಯಯನದ ಸಲುವಾಗಿ ನಗರದ ಎಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಈಚೆಗೆ ಚಿತ್ರದುರ್ಗ ಕಾರಾಗೃಹಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾರಾಗೃಹದಲ್ಲಿ ಊಟ, ವಸತಿ, ಗ್ರಂಥಾಲಯ ಸೌಲಭ್ಯದ ಜತೆಗೆ ಸಾಹಿತ್ಯ, ಕಲೆ, ಸಂಗೀತ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಿಸಲಾಗಿದೆ ಎಂದರು.
ಜೈಲುಗಳ ಬಗೆಗಳು, ಅವುಗಳ ಸುಧಾರಣೆ, ಪೋಕ್ಸೊ ಕಾಯ್ದೆ, ಖೈದಿಗಳ ನಡಾವಳಿ ಮತ್ತು ಶಿಕ್ಷೆ ಇತ್ಯಾದಿ ಕುರಿತು ಜೈಲರ್ ಶ್ರೀಮಂತಗೌಡ ಪಾಟೀಲ್ ಮಾಹಿತಿ ನೀಡಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಕೆ. ದೇವಪ್ಪ, ಗ್ರಂಥಪಾಲಕ ಶ್ರೀರಾಮರೆಡ್ಡಿ, ಸಹ ಪ್ರಾಧ್ಯಾಪಕ ಕೆ.ಸಿ.ಶರಣಪ್ಪ ಮಾತನಾಡಿದರು.
ಅಧ್ಯಾಪಕ ಟಿ.ನಾಗರಾಜ, ಸಮಾಜಶಾಸ್ತ್ರ ಉಪನ್ಯಾಸಕ ಚಿತ್ತಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.