ಹಿರಿಯೂರು: ತಾಲ್ಲೂಕಿನ ಕುರುಬರಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ಮಂಜಿಬಾಯಿ ಅಲಿಯಾಸ್ ಲಕ್ಷ್ಮಿಬಾಯಿ (45) ಗಾಯಗೊಂಡ ಮಹಿಳೆ. ಇವರನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ನಸುಕಿನಲ್ಲಿ ಮಹಿಳೆ ಮನೆಯ ಮುಂಭಾಗದಲ್ಲಿ ಮಲಗಿದ್ದಾಗ ಚಿರತೆ ದಾಳಿ ಮಾಡಿದೆ. ಮಂಜಿಬಾಯಿ ಅವರ ಕೈಗಳಿಗೆ ಕಚ್ಚಿ ಮನೆಯ ಹಿಂಭಾಗದ ತಿಪ್ಪೆಯ ಬಳಿಗೆ ಎಳೆದೊಯ್ದಿದೆ. ಇದನ್ನು ನೋಡಿದ ಮಂಜಿಬಾಯಿ ಸೊಸೆ ಜೋರಾಗಿ ಕಿರುಚಿದ್ದಾರೆ. ಗಾಬರಿಗೊಂಡ ಚಿರತೆ ಮಹಿಳೆಯನ್ನು ಬಿಟ್ಟು ಪರಾರಿ ಆಗಿದೆ.
ಗಣೇಶ ಎಂಬುವವರು ಕಲ್ಲು ಬೀಸಿ ಚಿರತೆ ಓಡಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ದಿನಗಳಿಂದ ಚಿರತೆ ಕಾಣಿಸಿಕೊಂಡು, ಗ್ರಾಮದಲ್ಲಿ ಆತಂಕ ಸೃಷ್ಟಿಸಿತ್ತು. ಚಿರತೆ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.