ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಲಾಕ್‌ಡೌನ್‌ಗೆ ಸ್ಪಂದನೆ, ಸ್ತಬ್ಧವಾದ ಜಿಲ್ಲೆ

ಮಾರ್ಗಸೂಚಿ ಉಲ್ಲಂಘಿಸಿದವರಿಗೆ ಬಸ್ಕಿ ಹೊಡೆಸಿದ ಪೊಲೀಸರು
Last Updated 10 ಮೇ 2021, 13:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮೇ 24ರವರೆಗೆ ಘೋಷಣೆ ಮಾಡಿದ ಲಾಕ್‌ಡೌನ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸೋಂಕಿನ ಭಯ, ಪೊಲೀಸರು ವಿಧಿಸುವ ಶಿಕ್ಷೆಯ ಪರಿಣಾಮವಾಗಿ ಸೋಮವಾರ ಮನೆಯಿಂದ ಹೊರಗೆ ಬಂದವರು ಕಡಿಮೆ. ಮಾರ್ಗಸೂಚಿ ಉಲ್ಲಂಘಿಸಿದವರಿಗೆ ಪೊಲೀಸರು ಬಸ್ಕಿ ಹೊಡೆಸಿ ಎಚ್ಚರಿಕೆ ನೀಡಿದರು.

ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಕಾಣುತ್ತಿದ್ದ ಜನಸಂಚಾರ ಸಮಯ ಕಳೆದಂತೆ ಕರಗಿ ಹೋಯಿತು. ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶಗಳು ಜನರಲ್ಲಿದೇ ಬಿಕೊ ಎನ್ನುತ್ತಿದ್ದವು. ಅನಗತ್ಯವಾಗಿ ಸಂಚರಿಸುತ್ತಿದ್ದವರನ್ನು ಪೊಲೀಸರು ವಿಚಾರಿಸುತ್ತಿದ್ದರು. ಸಕಾರಣ ಇಲ್ಲದೇ ಮನೆಯಿಂದ ಹೊರಗೆ ಬಂದವರ ವಾಹನಗಳನ್ನು ಜಪ್ತಿ ಮಾಡಿದರು.

ಕೋವಿಡ್‌ ಮಾರ್ಗಸೂಚಿಯನ್ನು ಬದಲಾವಣೆ ಮಾಡಿದ ಸರ್ಕಾರ ಸೋಮವಾರದಿಂದ ಹೊಸ ರೀತಿಯ ಲಾಕ್‌ಡೌನ್‌ ಜಾರಿಗೆ ತಂದಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸಜ್ಜಾದ ಪೊಲೀಸರು ಎರಡು ದಿನಗಳಿಂದ ಸಿದ್ಧತೆ ಮಾಡಿಕೊಂಡಿದ್ದರು. ಧ್ವನಿವರ್ಧದಕ ಮೂಲಕ ಜನರಿಗೆ ತಿಳಿವಳಿಕೆ ನೀಡುವ ಪ್ರಯತ್ನ ಮಾಡಿದ್ದರು. ಪೊಲೀಸರ ಎಚ್ಚರಿಕೆಯನ್ನು ಮೀರಿದವರು ಶಿಕ್ಷೆಗೆ ಗುರಿಯಾದರು.

ತರಕಾರಿ ಖರೀದಿಗೆ ಮುಗಿಬಿದ್ದರು:ತರಕಾರಿ, ದಿನಸಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ನಸುಕಿನಲ್ಲೇ ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು ತರಕಾರಿ ಖರೀದಿಸಿದರು. ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ, ತ್ಯಾಗರಾಜ ಮಾರುಕಟ್ಟೆ, ಹಳೆ ಮಾಧ್ಯಮಿಕ ಶಾಲಾ ಆವರಣ, ಜೆಸಿಆರ್‌ ಬಡಾವಣೆ ಸೇರಿ ಹಲವೆಡೆ ತರಕಾರಿ ಮಾರಾಟಕ್ಕೆ ತಾತ್ಕಾಲಿಕ ಮಾರುಕಟ್ಟೆಗಳನ್ನು ನಿರ್ಮಿಸಲಾಗಿದೆ.

ಮೈದಾನಗಳಲ್ಲಿ ಶಿಸ್ತುಬದ್ಧವಾಗಿ ತರಕಾರಿ ವಹಿವಾಟು ನಡೆಯಿತು. ನಸುಕಿನಲ್ಲೇ ಬಂದಿದ್ದ ವ್ಯಾಪಾರಿಗಳು ಮಾರಾಟಕ್ಕೆ ತರಕಾರಿ ಇಟ್ಟುಕೊಂಡು ಗ್ರಾಹಕರ ಬರುವಿಕೆಗೆ ಕಾಯುತ್ತಿದ್ದರು. ಸೂರ್ಯ ಉದಯಿಸುವ ಹೊತ್ತಿಗೆ ಬರಲಾರಂಭಿಸಿದ ಗ್ರಾಹಕರು ಖರೀದಿಗೆ ಮುಗಿಬಿದ್ದರು. ಬಹುತೇಕರು ಅಂತರ ಮರೆತು ವರ್ತಿಸಿದರು.

ಅಂತರ ಮರೆತ ಗ್ರಾಹಕರು:ದಿನಸಿ ಅಂಗಡಿಗಳ ಬಳಿ ಬೆಳಿಗ್ಗೆಯಿಂದಲೇ ಗ್ರಾಹಕರು ಸಾಲುಗಟ್ಟಿ ನಿಂತಿದ್ದರು. ದಿನಸಿ ಸಾಮಗ್ರಿಗಳನ್ನು ಖರೀದಿಸಲು ಬಂದಿದ್ದವರು ಅಂತರ ಕಾಯ್ದುಕೊಳ್ಳುವುದನ್ನು ಮರೆತರು. ಮನೆಗೆ ಮರಳುವ ಅವಸರದಲ್ಲಿ ಮುಗಿಬಿದ್ದು ಸಾಮಗ್ರಿ ಖರೀದಿಸಿದರು. ನಗರ ವ್ಯಾಪ್ತಿಯಲ್ಲಿ ಗಸ್ತು ತಿರುಗಿ ಪರಿಶೀಲಿಸುತ್ತಿದ್ದ ಪೊಲೀಸರು ಎಚ್ಚರಿಕೆ ನೀಡಿದರು. ಮಾಸ್ಕ್‌ ಧರಿಸದವರಿಗೆ ಪೊಲೀಸರು ದಂಡ ವಿಧಿಸಿದರು.

ವಾಹನ ಸಂಚಾರ ನಿರ್ಬಂಧಿಸಲು ಪ್ರಮುಖ ರಸ್ತೆ, ಬಡಾವಣೆಯ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಅನೇಕರು ಕಾಲ್ನಡಿಗೆಯಲ್ಲೇ ಮಾರುಕಟ್ಟೆಗೆ ಬಂದಿದ್ದರು. ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗೆ ಮರಳಿದರು. ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆ, ಬಿ.ಡಿ.ರಸ್ತೆಯಲ್ಲಿದ್ದ ಪೊಲೀಸರು ಜನದಟ್ಟಣೆ ಉಂಟಾಗದಂತೆ ನೋಡಿಕೊಂಡರು. ಬೀದಿ ಸುತ್ತಿ ತರಕಾರಿ ಮಾರಾಟ ಮಾಡಲು ಸಂಜೆಯವರೆಗೆ ಅವಕಾಶವಿದ್ದರೂ ಆಸಕ್ತಿ ತೋರಿದವರು ವಿರಳ.

ಚೆಕ್‌ಪೋಸ್ಟ್‌ ತಪಾಸಣೆ:ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯ ವಾಹನ ಸಂಚಾರವನ್ನು ತಡೆಯುವ ಉದ್ದೇದಿಂದ ಜಿಲ್ಲೆಯಲ್ಲಿ ಪೊಲೀಸರು 36 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ. ಅನಗತ್ಯವಾಗಿ ಸಂಚರಿಸುವ ಪ್ರಯಾಣಿಕ ವಾಹನಗಳನ್ನು ತಪಾಸಣೆ ನಡೆಸಿದರು.

ಹಿರಿಯೂರು ತಾಲ್ಲೂಕಿನ ಜೆ.ಜಿ.ಹಳ್ಳಿಯ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ, ಚಿತ್ರದುರ್ಗ ತಾಲ್ಲೂಕಿನ ಎಮ್ಮೆಹಟ್ಟಿ, ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ, ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಹಲವೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಪ್ರತಿ ವಾಹನವನ್ನು ತಡೆದು ಪೊಲೀಸರು ತಪಾಸಣೆ ನಡೆಸಿದರು. ಅಗತ್ಯ ಸೇವೆಯ ವ್ಯಾಪ್ತಿಗೆ ಒಳಪಡುವವರು ಹಾಗೂ ತುರ್ತು ಸೇವೆಯ ಅಗತ್ಯ ಇರುವವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಯಿತು. ಸರಕು ಸಾಗಣೆ ವಾಹನಗಳಿಗೆ ಯಾವುದೇ ನಿರ್ಬಂಧ ಇರಲಿಲ್ಲ.

ಬೀದಿಗೆ ಇಳಿದ ಎಸ್‌ಪಿ:ಜನ ಸಂಚಾರವನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಸೋಮವಾರ ಬೀದಿಗೆ ಇಳಿದಿದ್ದರು.

ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಅವರು ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಎಚ್ಚರಿಕೆ ನೀಡಿದರು. ಕಠಿಣ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ ಎಂಬುದನ್ನು ಮನದಟ್ಟು ಮಾಡಿದರು.

‘ವಾಹನ ಬಳಕೆಗೆ ಅವಕಾಶ ನೀಡಿದರೆ ಜನಸಂಚಾರ ಹೆಚ್ಚಾಗುತ್ತದೆ. ಹೀಗಾಗಿ, ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಂಚಾರಿ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ಪ್ರತಿ ರಸ್ತೆಯ ಮೇಲೆ ನಿಗಾ ಇಡಲಾಗಿದೆ. ತರಕಾರಿ ಮಾರುಕಟ್ಟೆಗೆ ಕುಟುಂಬ ಸಹಿತ ಬರುವುದನ್ನು ನಿಲ್ಲಿಸಿ’ ಎಂದು ರಾಧಿಕಾ ತಾಕೀತು ಮಾಡಿದರು.

474 ವಾಹನ ಜಪ್ತಿ:ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿ ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು ಜಿಲ್ಲೆಯಲ್ಲಿ ಒಂದೇ ದಿನ 474 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಚಳ್ಳಕೆರೆ ಠಾಣೆ ವ್ಯಾಪ್ತಿಯೊಂದರಲ್ಲೇ 110 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೋಟೆ ಠಾಣೆ 30, ಟೌನ್‌ ಠಾಣೆ 15, ಗ್ರಾಮಾಂತರ 18, ಬಡಾವಣೆ 14, ಸಂಚಾರ ಠಾಣೆ 6, ಭರಮಸಾಗರ 25, ತುರುವನೂರು 17, ಚಿಕ್ಕಜಾಜೂರು 25, ಚಿತ್ರಹಳ್ಳಿ 16, ಹೊಸದುರ್ಗ 23, ಶ್ರೀರಾಂಪುರ 12, ಹಿರಿಯೂರು ಟೌನ್‌ 25, ಗ್ರಾಮಾಂತರ 10, ಅಬ್ಬಿನಹೊಳೆ 10, ಐಮಂಗಲ 13, ಪರಶುರಾಂಪುರ 7, ತಳಕು 13, ನಾಯಕನಹಟ್ಟಿ 16, ಮೊಳಕಾಲ್ಮುರು 31, ರಾಂಪುರ ಠಾಣೆ ವ್ಯಾಪ್ತಿಯಲ್ಲಿ 25 ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT