ಚಿತ್ರದುರ್ಗ:ಪೋಕ್ಸೊ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಳಗಾದ ಸಮಯದಲ್ಲೇ ಇಲ್ಲಿನ ಮುರುಘಾ ಮಠದಲ್ಲಿ ಆರು ಜೋಡಿ ವಧು - ವರರು ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು.
ಏಳು ಜೋಡಿಗಳು ನೋಂದಣಿಯಾಗಿದ್ದರು ಸಹ ಕೊನೆ ಕ್ಷಣದಲ್ಲಿ ಆರು ಜೋಡಿಗಳು ಮಾತ್ರ ಹಾಜರಾದರು. ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ನೆರವೇರಿತು.
'ಮುರುಘಾ ಮಠದಲ್ಲಿ 32 ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆದುಕೊಂಡು ಬಂದಿದೆ. ಇದು ಗಿನ್ನಿಸ್ ದಾಖಲೆ ತಲುಪಲು ಬಂದಿದೆ. ಇಂದು ಆರು ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ' ಎಂದು ಮಹಾಂತ ರುದ್ರೇಶ್ವರ ಸ್ವಾಮೀಜಿ ತಿಳಿಸಿದರು.
'ಮಠದಲ್ಲಿ ಚಾಚು ತಪ್ಪದೇ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಅನ್ನದಾಸೋಹ, ಶಿಕ್ಷಣ ದಾಸೋಹ , ಮುರುಘಾ ವನದ ಪ್ರವೇಶ ಸೇರಿದಂತೆ ಎಲ್ಲವೂ ಎಂದಿನಂತೆ ನಡೆಯುತ್ತಿದೆ. ಮುರುಘಾ ಮಠದಲ್ಲಿ ನೀರವ ಮೌನ ಇಲ್ಲ. ನಿರ್ಭಯವಾಗಿ ಭಕ್ತರು ಬರಬಹುದು' ಎಂದು ಅಭಯ ನೀಡಿದರು.