ಚಿತ್ರದುರ್ಗ: ಕೊಳವೆ ಮೂಲಕ ಮನೆಗಳಿಗೆ ನೈಸರ್ಗಿಕ ಅಡುಗೆ ಅನಿಲ (ಪಿಎನ್ಜಿ) ಪೂರೈಸುವ ಬಹುನಿರೀಕ್ಷಿತ ಯೋಜನೆ ನಗರದ ಧವಳಗಿರಿ ಬಡಾವಣೆಯಲ್ಲಿ ಅನುಷ್ಠಾನಗೊಂಡಿದೆ. ಪ್ರಾರಂಭಿಕ ಹಂತದಲ್ಲಿ 15 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.
ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಕೈಗೆತ್ತಿಕೊಂಡ ಈ ಯೋಜನೆಗೆ 2018ರ ನವೆಂಬರ್ನಲ್ಲಿ ಚಾಲನೆ ಸಿಕ್ಕಿತ್ತು. ಕೊಳವೆ ಮಾರ್ಗ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಆಯ್ದ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಧವಳಗಿರಿ ಬಡಾವಣೆಯ ಎರಡನೇ ಹಂತದ ನಿವಾಸಿ ಜಿ.ಎಸ್.ಗುರುಮೂರ್ತಿ ಎಂಬುವರ ಮನೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಯೋಜನೆಗೆ ಚಾಲನೆ ನೀಡಿದರು.
‘ಮುಂಬೈ, ದೆಹಲಿ ಹಾಗೂ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ನೈಸರ್ಗಿಕ ಅನಿಲ ಚಿತ್ರದುರ್ಗದಲ್ಲಿಯೂ ಲಭ್ಯ ಆಗುತ್ತಿದೆ. ಸಂಪರ್ಕ ಸುರಕ್ಷಿತವಾಗಿದ್ದು, ಕಡಿಮೆ ಬೆಲೆಗೆ ದೊರೆಯಲಿದೆ. ಅನಿಲವೂ ವ್ಯರ್ಥವಾಗುವುದಿಲ್ಲ. ಸಿಲಿಂಡರ್ ಖರೀದಿಸುವ ಅಗತ್ಯವಿಲ್ಲ. ಗ್ರಾಹಕರಿಗೆ ನಿರಂತರವಾಗಿ ಅನಿಲ ಪೂರೈಕೆಯಾಗಲಿದೆ. ಎಲ್ಪಿಜಿಗೆ ಹೊಲಿಸಿದರೆ ಶೇ 25ರಷ್ಟು ಹಣ ಉಳಿತಾಯವಾಗಲಿದೆ’ ಎಂದು ಶಾಸಕ ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.
‘ನಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಸಂಪರ್ಕ ಕಲ್ಪಿಸುವುದು ಕೊಂಚ ವಿಳಂಬವಾಗುತ್ತಿದೆ. ಒಂದೂವರೆ ವರ್ಷದಲ್ಲಿ ಇಡೀ ಜಿಲ್ಲೆಗೆ ಅನಿಲ ಸಂಪರ್ಕ ಜಾಲ ವಿಸ್ತರಣೆಯಾಗಲಿದೆ. ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು’ ಎಂದು ಸೂಚನೆ ನೀಡಿದರು.
ಸಂಪರ್ಕ ಪಡೆಯುವುದು ಹೇಗೆ?
ಮನೆಗೆ ನೈಸರ್ಗಿಕ ಅನಿಲ (ಪಿಎನ್ಜಿ) ಸಂಪರ್ಕ ಪಡೆಯಲು ಅಂದಾಜು ₹ 30 ಸಾವಿರ ವೆಚ್ಚವಾಗಲಿದೆ. ₹ 5 ಸಾವಿರ ಭದ್ರತಾ ಠೇವಣಿ, ₹ 1 ಸಾವಿರ ನೋಂದಣಿ ಶುಲ್ಕ ಹಾಗೂ ₹ 250 ಅರ್ಜಿ ಶುಲ್ಕ ನಿಗದಿಪಡಿಸಲಾಗುತ್ತದೆ.
ಧವಳಗಿರಿ ಬಡಾವಣೆ, ನೆಹರೂ ನಗರ, ಬಿವಿಕೆಎಸ್ ಬಡಾವಣೆ, ಮುನ್ಸಿಪಲ್ ಕಾಲೊನಿ, ಬಿಎಲ್ಗೌಡ ಬಡಾವಣೆಯಲ್ಲಿ 45 ಕಿ.ಮೀ.ಗೂ ಹೆಚ್ಚು ಕೊಳವೆ ಮಾರ್ಗ ನಿರ್ಮಿಸಲಾಗಿದೆ.
ಲಿಕ್ವಿಡ್ ಪೆಟ್ರೋಲಿಂ ಗ್ಯಾಸ್ಗೆ (ಎಲ್ಪಿಜಿ) ಹೋಲಿಸಿದರೆ ನೈಸರ್ಗಿಕ ಅನಿಲ ಅಗ್ಗ. ಪರಿಸರ ಸ್ನೇಹಿಯಾಗಿರುವ ಈ ಅನಿಲ ಸುರಕ್ಷಿತವೂ ಹೌದು. ಅನಿಲ ಸೋರಿಕೆಯಾದಾಗ ಬೆಂಕಿ ಹೊತ್ತಿಕೊಂಡು ಅಪಾಯ ಉಂಟಾಗುವ ಸಾಧ್ಯತೆ ಕಡಿಮೆ.
42 ಸಿಎನ್ಜಿ ಕೇಂದ್ರ
ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಬದಲು ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್ಜಿ) ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ. ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ 42 ಸಿಎನ್ಜಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿಯಲ್ಲಿ ಸಿಎನ್ಜಿ ರಿಟೇಲ್ ಔಟ್ಲೇಟ್ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಜಿಎಚ್ಆರ್ ಪೆಟೋಲ್ ಬಂಕ್ ಬಳಿ ಸಿಎನ್ಜಿ ಕೇಂದ್ರ ಸ್ಥಾಪಿಸಲಾಗಿದೆ. ಹಿರಿಯೂರು, ಚಳ್ಳಕೆರೆಯಲ್ಲಿ ಸಿಎನ್ಜಿ ಕೇಂದ್ರ ತೆರೆಯಲು ಸಿದ್ಧತೆ ನಡೆಯುತ್ತಿದೆ.
ಯುಇಪಿಎಲ್ ಕಂಪನಿಯ ಸುನೀಲ್ ಪೂಜಾರಿ, ಧವಳಗಿರಿ ಬಡಾವಣೆಯ ಸಿ.ಜಿ.ಶ್ರೀನಿವಾಸ್, ಮರುಳಸಿದ್ಧಪ್ಪ ಇದ್ದರು.
***
ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಕಾರ್ಯವನ್ನು ಕಂಪನಿ ಕೈಗೆತ್ತಿಕೊಂಡಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿ ಅನಿಲ ಪ್ರಾಧಿಕಾರ ಅನುಮತಿ ನೀಡಿದೆ.
ಸಂದೀಪ್ ಶರ್ಮಾ
ಯುಇಪಿಎಲ್ ಕಂಪನಿಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.