ಚಳ್ಳಕೆರೆ: 2019-20ನೇ ಸಾಲಿನಲ್ಲಿ ಬೆಳೆವಿಮೆ ಪಾವತಿಸಿದ ಕೆಲ ರೈತರಿಗೆ, ವಿಮಾ ಕಂಪನಿಯಿಂದ ಯಾವುದೇ ಹಣ ಬಂದಿಲ್ಲ. ಹಾಗಾಗಿ ವಂಚಿತ ರೈತರಿಗೆ ಕೂಡಲೇ ಬೆಳೆವಿಮೆಯನ್ನು ತರಿಸಿಕೊಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಅಧಿಕಾರಿಗಳನ್ನು ಆಗ್ರಹಿಸಿದರು.
ಸೋಮವಾರ ತಾಲ್ಲೂಕು ಕಚೇರಿಯಲ್ಲಿ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಒಣ ಭೂಮಿಯಲ್ಲಿ ಉಳುಮೆ ಪ್ರಾರಂಭಿಸಲು ರೈತರು, ಮುಂಗಾರು ಮಳೆಯನ್ನೇ ಎದುರು ನೋಡುತ್ತಿದ್ದಾರೆ. ಆದ್ದರಿಂದ ಇನ್ನು 7–8 ದಿನಗಳಲ್ಲಿ ಬೆಳೆವಿಮೆಯನ್ನು ಖಾತೆಗೆ ಜಮಾ ಮಾಡಿದರೆ ರೈತರ ಕೃಷಿ ಚಟವಟಿಕೆಗೆ ಅನುಕೂಲವಾಗುತ್ತದೆ ಎಂದರು.
ರೈತ ಮುಖಂಡ ಶ್ರೀನಿವಾಸರೆಡ್ಡಿ, ಬೆಳೆವಿಮೆ ಪಾವತಿಸುವ ಸಲುವಾಗಿ ಕೆಲ ರೈತರು ಮನೆಯಲ್ಲಿನ ಆಭರಣಗಳನ್ನು ಒತ್ತೆ ಇಟ್ಟಿದ್ದಾರೆ. ಆದರೂ ವಿಮೆ ಬಂದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಕೋರೊನಾ ಕಾರಣ ರೈತ ಸಮುದಾಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ವಂಚಿತ ರೈತರಿಗೆ ವಿಮೆಯನ್ನು ತರಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಡಾ.ಮೋಹನ್ಕುಮಾರ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹಂಪಣ್ಣ ಮಾತನಾಡಿದರು. ರೈತ ಮುಖಂಡ ಚಂದ್ರಣ್ಣ, ತಿಪ್ಪೇಸ್ವಾಮಿ, ಸುದರ್ಶನ ರೆಡ್ಡಿ ಅವರೂ ಈ ಸಂದರ್ಭದಲ್ಲಿ ಇದ್ದರು.