ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಶ್ರಾವಣದ ಪೂಜೆಗೆ ಕೋಟೆನಗರಿ ಸಜ್ಜು

ನಿತ್ಯದ ಪೂಜೆ ಮುಂಜಾನೆಯಿಂದಲೇ ಆರಂಭ * ವಿಶೇಷ ಪುಷ್ಪಾಲಂಕಾರ, ಪ್ರಸಾದ ವಿತರಿಸದಿರಲು ನಿರ್ಧಾರ
Last Updated 19 ಜುಲೈ 2020, 16:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಶ್ರಾವಣ ಮಾಸ ಜುಲೈ 21 ರಿಂದ ಆರಂಭವಾಗಲಿದೆ. ಕೋಟೆನಗರಿಯ ನವದುರ್ಗೆಯರು, ಶಿವ, ಗಣಪತಿ, ವೆಂಕಟೇಶ್ವರ, ನರಸಿಂಹಸ್ವಾಮಿ, ಆಂಜನೇಯ ಸೇರಿ ವಿವಿಧ ದೇಗುಲಗಳಲ್ಲಿ ನಿತ್ಯ ಪೂಜೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕೋವಿಡ್-19 ಮಾರ್ಗಸೂಚಿಯಂತೆ ದೇಗುಲಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಶ್ರಾವಣದ ಮೊದಲ ದಿನ ಮಂಗಳವಾರ ಬಂದಿರುವ ಕಾರಣ ನವದುರ್ಗೆಯರ ದೇಗುಲಗಳನ್ನು ಸ್ವಚ್ಛಗೊಳಿಸುವ ಕಾರ್ಯಭರದಿಂದ ಸಾಗಿದೆ. ಈ ಮಾಸದಲ್ಲಿ ಸಾಮಾನ್ಯವಾಗಿ ದೇಗುಲಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚು. ಆದರೆ, ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಗುಂಪು ಗುಂಪಾಗಿ ದೇಗುಲ ಪ್ರವೇಶಿಸಲು ಅವಕಾಶ ನೀಡದಿರಲು ಹಾಗೂ ತೀರ್ಥ, ಪ್ರಸಾದ ವಿತರಿಸದಿರಲು ಆಡಳಿತ ಮಂಡಳಿ, ಸೇವಾ ಟ್ರಸ್ಟ್‌ಗಳು ತೀರ್ಮಾನಿಸಿವೆ.

ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ರಾಜ ಉತ್ಸವಾಂಬ ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆ ಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಗೌರಸಂದ್ರ ಮಾರಮ್ಮ, ಬನ್ನಿ ಮಹಾಕಾಳಿಕಾಂಬ, ಕುಕ್ಕವಾಡೇಶ್ವರಿ, ಚೌಡೇಶ್ವರಿ ದೇವತೆ ದೇಗುಲಗಳಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ, ಮಾರಿಕಾಂಬ ಸೇರಿ ವಿವಿಧ ಶಕ್ತಿದೇವತೆ ದೇಗುಲಗಳಲ್ಲೂ ವಿಶೇಷ ಪೂಜೆ ನಡೆಸಲು ದೇಗುಲದ ಆಡಳಿತ ಮತ್ತು ಭಕ್ತ ಮಂಡಳಿ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಶಿವ ದೇಗುಲಗಳಲ್ಲಿ ವಿಶೇಷ ಪೂಜೆ: ಶಿವನ ಆರಾಧಕರಿಗೆ ಸೋಮವಾರ ಶ್ರೇಷ್ಠ ದಿನವಾದ್ದರಿಂದ ಶ್ರಾವಣ ಮಾಸದ ಎಲ್ಲ ಸೋಮವಾರ ಶಿವನ ಮೂರ್ತಿಗೆ ಜಲಾಭಿಷೇಕ, ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾ ಪತ್ರೆ ಅರ್ಚನೆ ಜತೆಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ.

ಮೇಲುದುರ್ಗದ ಹಿಡಂಭೇಶ್ವರ, ಸಂಪಿಗೆ ಸಿದ್ದೇಶ್ವರ, ಕಾಶಿವಿಶ್ವೇಶ್ವರ, ಪಲ್ಗುಣೇಶ್ವರ, ಕರ್ವತೀಶ್ವರ, ಕೋಟೆ ರಸ್ತೆ ಮಾರ್ಗದ ಗಾರೆಬಾಗಿಲು ಈಶ್ವರ, ಉಮಾ ಮಹೇಶ್ವರ, ನಗರದ ಹೃದಯ ಭಾಗದ ನೀಲಕಂಠೇಶ್ವರ, ದೊಡ್ಡಪೇಟೆ ಕಂಬಳಿ ಬೀದಿಯ ಬೀರಗಲ್ಲೇಶ್ವರ, ನಗರೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ ಸೇರಿ ವಿವಿಧ ಶಿವ ದೇಗುಲಗಳಲ್ಲಿ ಪೂಜೆಗಳು ನೆರವೇರಲಿವೆ.

ಗಣಪತಿ, ರಾಯರ ಮಠದಲ್ಲೂ ವಿಶೇಷ: ಮೇಲುದುರ್ಗದ ಬೆಟ್ಟದ ಗಣಪತಿ, ಮದಕರಿ ಮಹಾಗಣಪತಿ, ಪ್ರಸನ್ನ ಗಣಪತಿ, ಹೊಳಲ್ಕೆರೆ ರಸ್ತೆಯ ದೊಡ್ಡೊಟ್ಟೆ ಗಣಪತಿ, ಜೆಸಿಆರ್‌ ಬಡಾವಣೆಯ ಗಣಪತಿ ದೇಗುಲಗಳಲ್ಲೂ ಶ್ರಾವಣದ ಪ್ರತಿ ಮಂಗಳವಾರ ಮತ್ತು ಬುಧವಾರ ವಿಶೇಷ ಪೂಜೆ ನಡೆಯಲಿದೆ. ಪ್ರತಿ ಗುರುವಾರ ಇಲ್ಲಿನ ಚಿಕ್ಕಪೇಟೆ ರಸ್ತೆ ಮಾರ್ಗದಲ್ಲಿರುವ ಗುರು ರಾಘವೇಂದ್ರಸ್ವಾಮಿ ಮಠದಲ್ಲಿಯೂ ವಿವಿಧ ರೀತಿಯ ಪೂಜೆ ನಡೆಯಲಿದೆ ಎಂದು ದೇಗುಲಗಳ ಅರ್ಚಕರು ತಿಳಿಸಿದ್ದಾರೆ.

ಆಂಜನೇಯಸ್ವಾಮಿಗೂ ನಮನ:ಶ್ರಾವಣ ಮಾಸದ ಪ್ರತಿ ಶನಿವಾರ ಇಲ್ಲಿನ ತಮಟಕಲ್ಲು ಆಂಜನೇಯ, ವೀರಾಂಜನೇಯ, ಕೋಟೆ ಆಂಜನೇಯ, ಬರಗೇರಿ ಆಂಜನೇಯ, ಕ್ರೀಡಾಂಗಣ ರಸ್ತೆಯ ಆಂಜನೇಯ, ರಕ್ಷಾ ಆಂಜನೇಯ, ಜೆಸಿಆರ್‌ ಆಂಜನೇಯಸ್ವಾಮಿ ದೇಗುಲಗಳಲ್ಲಿ ಬೆಣ್ಣೆ ಅಲಂಕಾರ, ವೀಳ್ಯದೆಲೆ ಅಲಂಕಾರ, ಕುಂಕುಮ, ಪುಷ್ಪಾಲಂಕಾರ ನಡೆಯಲಿದೆ.

ತುರುವನೂರು ರಸ್ತೆಯ ವೆಂಕಟರಮಣಸ್ವಾಮಿ, ಆನೆಬಾಗಿಲು ವೆಂಕಟೇಶ್ವರಸ್ವಾಮಿ, ಲಕ್ಷ್ಮಿನರಸಿಂಹಸ್ವಾಮಿ, ಉಗ್ರನರಸಿಂಹಸ್ವಾಮಿ ದೇಗುಲಗಳಲ್ಲೂ ಪೂಜೆಗಳು ನೆರವೇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT