ಧರ್ಮಪುರ: ಸಮೀಪದ ಖಂಡೇನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಾಟಿ ಮಾಡಿರುವ ರೇಷ್ಮೆ ಕೃಷಿ ಜಮೀನಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಆರ್ಥಿಕ ಸುಧಾರಣೆ ಮತ್ತು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಯಲು ಸೀಮೆಯ ರೈತರಿಗೆ ರೇಷ್ಮೆ ಕೃಷಿ ವರದಾನವಾಗಿದೆ. ನಮ್ಮಲ್ಲಿ ಗುಣಮಟ್ಟದ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಗುತ್ತಿದೆ. ಅದಕ್ಕಾಗಿ ಗುಣಮಟ್ಟದ ರೇಷ್ಮೆ ಗೂಡು ಉತ್ಪಾದನೆ ಮಾಡಿ’ ಎಂದರು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ತ್ರಿವೇಣಿ ಶಿವಪ್ರಸಾದಗೌಡ ಮಾತನಾಡಿ, ‘ಧರ್ಮಪುರ ಹೋಬಳಿಯಲ್ಲಿ ಹೆಚ್ಚಿನ ರೈತರು ಹಿಪ್ಪು ನೇರಳೆ ಕೃಷಿ ಅವಲಂಬಿಸಿದ್ದಾರೆ. ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕು’ ಎಂದು ಹೇಳಿದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ಬಿ.ಎಲ್.ಕೃಷ್ಣಪ್ಪ, ಪಿಡಿಒ ಬಾಲಸುಬ್ರಮಣ್ಯ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ರೈತರಾದ ಈಶ್ವರಪ್ಪ, ಜಿಯಾವುಲ್ಲಾ, ಶಂಕರ್ ಯಾದವ್, ನರಸಿಂಹಮೂರ್ತಿ ಇದ್ದರು.