ಚಿತ್ರದುರ್ಗ: ಸಮಾಜದ ಅಂಕು–ಡೊಂಕುಗಳನ್ನು ತಿದ್ದುವಲ್ಲಿ ರಂಗಭೂಮಿ ಸಹಕಾರಿಯಾಗಿದೆ ಎಂದು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಜಿ.ಎನ್.ಯಶೋಧರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ‘ಶಿಕ್ಷಣದಲ್ಲಿ ರಂಗಭೂಮಿಯ ಪ್ರಸ್ತುತತೆ’ ವಿಷಯ ಕುರಿತು ಉಪನ್ಯಾಸ ನೀಡಿದರು.
‘ಸಮಾಜದೊಂದಿಗೆ ರಂಗಭೂಮಿ ಬೆರೆಸುವುದರಿಂದ ಶಿಸ್ತಿನ ಬದುಕಿಗೆ ದಾರಿದೀಪವಾಗುತ್ತದೆ. ಶಿಕ್ಷಕರು ಮಕ್ಕಳ ಉನ್ನತಿಗಾಗಿ ರಂಗ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ರಂಗ ಶಿಬಿರ, ಪಠ್ಯಾಧಾರಿತ ವಿಷಯ ವಸ್ತುಗಳನ್ನು ಆಧರಿಸಿ ಬೋಧನೆಯಲ್ಲಿ ತೊಡಗಬೇಕು’ ಎಂದರು.
‘ಮೌಲ್ಯಯುತ ಕಾರ್ಯಕ್ರಮಗಳಲ್ಲಿ ಜನರ ಆಸಕ್ತಿ ಕಡಿಮೆಯಾಗುತ್ತಿದೆ. ಫ್ಯಾಷನ್ ಯುಗದ ಬದುಕಿನ ಆಕರ್ಷಣೆಗೆ ಒಳಗಾದ ಜನಸಾಮಾನ್ಯರಿಗೆ ರಂಗ ಜಾಗೃತಿ ಮೂಡಿಸಬೇಕಾಗಿದೆ. ಸತ್ವಯುತ ಬದುಕು ನಡೆಸಬೇಕಾದರೆ ರಂಗಭೂಮಿಯಲ್ಲಿ ಆಳವಾದ ಅಭ್ಯಾಸ ನಡೆಸಬೇಕು. ಶರೀರ ಮತ್ತು ಶಾರೀರ ಸದೃಢವಾಗಿ ಆರೋಗ್ಯಕರ ಆಗಿರಬೇಕಾದರೆ ಅದು ರಂಗಭೂಮಿಯಿಂದ ಮಾತ್ರ ಸಾಧ್ಯ’ ಎಂದು ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್, ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಸಾಹಿತಿ ಎಂ.ಮೃತ್ಯುಂಜಯಪ್ಪ, ರಂಗ ಕಲಾವಿದರಾದ ಜಿ.ಎನ್.ಚಂದ್ರಪ್ಪ, ಶ್ರೀನಿವಾಸ್ ಮಳಲಿ, ಪ್ರಕಾಶ್ ಬಾದರದಿನ್ನಿ, ಶೈಲಶ್ರೀ ಹಿರೇಮಠ್, ಬಿ.ಜಿ.ಲೀಲಾವತಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.