ಸಿರಿಗೆರೆ: 12ನೇಶತಮಾನದಲ್ಲಿ ಸಾಮಾಜಿಕ ಸಮಾನತೆ, ಶಿಕ್ಷಣ, ಧಾರ್ಮಿಕ ನಂಬಿಕೆ ಹಾಗೂ ಇತರ ವಿಚಾರಗಳ ಕುರಿತು ಶರಣರ ಅವಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿದ ಕೀರ್ತಿ ಬಸವಣ್ಣ ಹಾಗೂ ಅಲ್ಲಮಪ್ರಭು ಅವರಿಗೆ ಸಲ್ಲುತ್ತದೆ ಎಂದು ಸಂಶೋಧಕ ಡಾ. ರಾಜಶೇಖರಪ್ಪ ಅಭಿಪ್ರಾಯಪಟ್ಟರು.
ಚಿತ್ರದುರ್ಗದ ತರಳಬಾಳು ಶಾಲಾ ಸಂಕೀರ್ಣದಲ್ಲಿ ಬೃಹನ್ಮಠದ ಅಣ್ಣನ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಚಾರಗೋಷ್ಠಿಯಲ್ಲಿ ವಚನ ಸಾಹಿತ್ಯದ ಕುರಿತು ಅವರು ಉಪನ್ಯಾಸ ನೀಡಿದರು.
‘ಭಾರತೀಯ ಸಂಸ್ಕೃತಿಯ ಹಾಗೂ ಮಾನವೀಯ ಮೌಲ್ಯಗಳನ್ನು ಸಾಹಿತ್ಯದ ಮೂಲಕ ಜಗತ್ತಿಗೆ ಪರಿಚಯಿಸಬೇಕಿದೆ. ಈ ನಿಟ್ಟಿನಲ್ಲಿ ಬದುಕಿನ ಮೌಲ್ಯವನ್ನು ಉನ್ನತೀಕರಿಸುವ ವಚನ ಸಾಹಿತ್ಯವನ್ನು ಅಂಗೈಯಲ್ಲಿ ದೊರಕುವಂತೆ ಮಾಡಿದ ಕೀರ್ತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್, ‘ಇಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ವಲಯದ ಪ್ರಕ್ಷುಬ್ಧ ವಾತಾವರಣದಲ್ಲಿ ವಚನ ಸಾಹಿತ್ಯವು ಸಂಜೀವಿನಿಯಾಗಿದೆ. ಬದುಕಿನ ಎಲ್ಲಾ ರಂಗಗಳ ಸಮಸ್ಯೆಗಳಿಗೆ ವಚನಸಾಹಿತ್ಯದಲ್ಲಿ ಪರಿಹಾರವಿದೆ’ ಎಂದು ಹೇಳಿದರು.
ಅಧ್ಯಾಪಕ ನಾಗರಾಜ ಸಿರಿಗೆರೆ ಮಾತನಾಡಿದರು.
ವಿಜ್ಞಾನ ಶಿಕ್ಷಕ ಎಂ.ರಂಗಣ್ಣ ಶಿವಶರಣ ವಚನ ಸಂಪುಟ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.