ಚಿತ್ರದುರ್ಗ: ‘ನಾಡು, ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಅನೇಕ ದಾರ್ಶನಿಕರಂತೆಯೇ ಜನಸೇವೆಯಲ್ಲಿ ತೊಡಗಿದ ಮಹಾಯೋಗಿ ವೇಮನ ಶ್ರೇಷ್ಠರಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮಂಗಳವಾರ ಸರಳವಾಗಿ ಆಯೋಜಿಸಿದ್ದ ‘ಮಹಾಯೋಗಿ ವೇಮನ’ ಜಯಂತಿ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.
‘ವೇಮನರು ಸಮಾಜದ ಒಳಿತಿಗಾಗಿ ವೈಭೋಗ ಜೀವನವನ್ನೇ ತ್ಯಾಗ ಮಾಡಿದ ಮಹಾನ್ ದಾರ್ಶನಿಕ. ಉತ್ತಮ ಮಾರ್ಗದಲ್ಲಿ ನಡೆಯಲು, ಬದುಕಿನುದ್ದಕ್ಕೂ ಸರಳತೆಯಿಂದ ಜೀವಿಸಲು ಇಂತಹ ಅನೇಕ ಮಹನೀಯರು ದಾರಿದೀಪ ಆಗಿದ್ದಾರೆ. ಹಿರಿಯರ ಮಾರ್ಗದರ್ಶನದಿಂದ ಭವಿಷ್ಯದಲ್ಲಿ ಸಾಕ್ಷಾತ್ಕಾರ ಪಡೆಯಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ, ‘ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ವೇಮನರು ಜನರಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಸದುದ್ದೇಶಕ್ಕಾಗಿ ದುಡಿದ ಕಾರಣದಿಂದಲೇ ಮಹನೀಯರಾಗಿದ್ದಾರೆ. ಇಂಥವರ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಉಪವಿಭಾಗಾಧಿಕಾರಿ ಡಾ.ನಾಗರಾಜ್, ಡಿಡಿಪಿಐ ರವಿಶಂಕರ್ ರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ರೆಡ್ಡಿ ಸಮುದಾಯದ ಕಾರ್ಯದರ್ಶಿ ಜಯರಾಂರೆಡ್ಡಿ ಇದ್ದರು.