‘ಚಿತ್ರದುರ್ಗ ಜಿಲ್ಲೆಯಿಂದ ಎರಡು ಬಾರಿ ಪರಿಷತ್ ಸದಸ್ಯನಾಗಿ ರಾಜಕೀಯವನ್ನು ಆರಂಭಿಸಿ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಖಚಿತಪಡಿಸಿದ್ದೇನೆ. ಪಕ್ಷವು ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ. ಪರಿಷತ್ ಸದಸ್ಯನಾಗಿದ್ದಾಗ ಸಾಕಷ್ಟು ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಿದ್ದೇನೆ. ಪರಿಷತ್ತಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಸೂದೆ ಮಂಡಿಸಿದ್ದೇನೆ. ಚಿತ್ರದುರ್ಗದಲ್ಲಿ ಭಾರತ್ ಜೋಡೊ ಯಾತ್ರೆ ಜರುಗಿದ ಸಂದರ್ಭದಲ್ಲಿ ನನಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ನನಗೆ ಸೂಕ್ತ ವೈದ್ಯಕೀಯ ನೆರವು ದೊರೆಯಲಿಲ್ಲ. ನಂತರ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದೆ. ಜಿಲ್ಲೆಯ ಆರೋಗ್ಯ ವ್ಯವಸ್ಥೆ ಉತ್ತಮವಾಗಿಲ್ಲ ಎಂದು ನನಗೆ ಅರ್ಥವಾಗಿದೆ. ಆದ್ದರಿಂದ ಕ್ಯಾದಿಗೆರೆ ಬಳಿಯಲ್ಲಿ 17 ಎಕರೆ ಪ್ರದೇಶದಲ್ಲಿ ₹ 370 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಚನೆ ಹೊಂದಿದ್ದೇನೆ. ಇದರಿಂದ ಜಿಲ್ಲೆಯ ಜನರಿಗೆ ಸಹಾಯವಾಗಲಿದೆ’ ಎಂದರು.