ಶಿವಮೊಗ್ಗ: ‘ಕಾಂಗ್ರೆಸ್ ರಾಷ್ಟ್ರ ವಿರೋಧಿ ಪಕ್ಷವಾಗಿ ಬೆಳೆಯುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಸಮಿತಿ ವಿಶೇಷ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
‘ಗಲಭೆ ಸೃಷ್ಟಿಯಾಗುವುದನ್ನೇಕಾಂಗ್ರೆಸ್ ಬಯಸುತ್ತದೆ. ಕಾಶ್ಮೀರ ವಿಷಯ, ಅಯೋಧ್ಯೆ ವಿಷಯದಲ್ಲಿಯೂ ಗಲಭೆ ಸೃಷ್ಟಿಯಾಗಲಿಲ್ಲ. ಈಗ ಪೌರತ್ವ ವಿಚಾರದಲ್ಲಿ ಗಲಭೆ ಮಾಡಿ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಿ ಬೆಂಕಿ ಹಚ್ಚುತ್ತಿದೆ. ಸಾವರ್ಕರ್ ವಿರುದ್ಧ ಮಾತನಾಡಿದವರು ಯಾರೇ ಆಗಲಿ ಅವರು ರಾಷ್ಟ್ರ ವಿರೋಧಿಗಳು’ ಎಂದು ಆರೋಪಿಸಿದರು.
ರಾಷ್ಟ್ರ ವಿರೋಧಿ ಪಕ್ಷವಾಗಿ ಬೆಳೆಯುತ್ತಿರುವ ಕಾಂಗ್ರೆಸ್, ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕುತ್ತಿದೆ.ಅಧಿಕಾರ ಇದ್ದಾಗ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕಾಂಗ್ರೆಸ್, ಅಧಿಕಾರ ಇಲ್ಲದಿದ್ದಾಗ ಗಲಭೆ ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ’ಎಂದು ಕುಟಕಿದರು.
ಇತ್ಮಧ್ಯೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ’ರಾಹುಲ್ ಗಾಂಧಿ ಅವರನ್ನು ಪಾಕಿಸ್ತಾನದ ಏಜೆಂಟ್‘ ಎಂದು ಕರೆದಿದ್ದು, ‘ಕಾಂಗ್ರೆಸ್ ಸಮುದಾಯವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ‘ ಎಂದು ದೂರಿದ್ದಾರೆ.